ರಾಜ್ಯ

ಶಶಿಕಲಾಗೆ ಯಾವುದೇ ಐಶಾರಾಮಿ ಸೌಲಭ್ಯ ನೀಡಿಲ್ಲ: ಗೃಹ ಸಚಿವ ರಾಮಲಿಂಗಾ ರೆಡ್ಡಿ

Lingaraj Badiger
ಬೆಂಗಳೂರು: ಅಕ್ರಮ ಆಸ್ತಿ ಪ್ರಕಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಎಐಎಡಿಎಂಕೆ ಉಚ್ಚಾಟಿತ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಯಾವುದೇ ಐಶಾರಾಮಿ ಸೌಲಭ್ಯ ನೀಡಿಲ್ಲ. ಸಾಮಾನ್ಯ ಕೈದಿಯಂತೆ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಹೇಳಿದ್ದಾರೆ.
ಶಶಿಕಲಾ ಮತ್ತು ಇಳವರಸಿಗೆ ಐಶಾರಾಮಿ ಸೌಲಭ್ಯ ನೀಡಲಾಗಿದೆ ಎಂಬ ವರದಿಯಲ್ಲಿ ಸತ್ಯಾಂಶ ಇಲ್ಲ. ನಾನು ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಖುದ್ದು ಪರಿಶೀಲಿಸಿರುವುದಾಗಿ ಇಂದು ವರದಿಗಾರರಿಗೆ ತಿಳಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಇಬ್ಬರು ಮಹಿಳೆಯರನ್ನು ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಶಶಿಕಲಾಗೆ ಮತ್ತು ಇಳವರಸಿಗೆ ಕೆಲಸ ನೀಡಿದಿರುವುದರ ಬಗ್ಗೆ ನಾನು ವಿಚಾರಿಸಲಿಲ್ಲ. ಆದರೆ ಕೋರ್ಟ್ ಆದೇಶವಿದ್ದರೆ ಅವರಿಗೆ ಕೆಲಸ ನೀಡಬೇಕು ಎಂದು ರಾಮಲಿಂಗಾ ರೆಡ್ಡಿ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಅವರು ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಶಶಿಕಲಾ ಅವರು ಉಳಿದುಕೊಂಡಿರುವ ಬ್ಯಾರಕ್‌ಗೆ ಹೋಗಿದ್ದ ಸಚಿವರು, ಅವರನ್ನು ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು. ಜೈಲಿನ ಮಹಿಳಾ ಹಾಗೂ ಪುರುಷ ಕೈದಿಗಳನ್ನು ಮಾತನಾಡಿಸಿ ಸಮಸ್ಯೆ ಆಲಿಸಿದ್ದರು.
ಜೈಲಿನ ಅಡುಗೆ ಮನೆ, ಊಟದ ಮನೆ, ಶೌಚಾಲಯ ಹಾಗೂ ಕೈದಿಗಳ ಕೊಠಡಿಗಳನ್ನು ಪರಿಶೀಲಿಸಿದ ಅವರು, ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
SCROLL FOR NEXT