ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಸಂಬಂಧ ಇದುವರೆಗೂ ನಾವು ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಹತ್ಯೆ ಮಾಡಿದವರು ಬಳಸಿದ್ದಾರೆ ಎನ್ನಲಾದ ಶಸ್ತ್ರದ ಬಗ್ಗೆ ಎದ್ದಿರುವ ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿರುವ ಅವರು, ಪ್ರಕರಣ ಸಂಬಂದ ತನಿಖೆ ನಡೆಯುತ್ತಿದೆ, ನೀವು ಕಾಯುತ್ತಿರುವಂತೆ ತನಿಖಾ ವರದಿಗಾಗಿ ನಾನು ಕಾಯುತ್ತಿದ್ದೇನೆ, ಎಸ್ ಐಟಿ ತನಿಖೆಯಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸುವುದಿಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಅವರು, ಮಾಧ್ಯಮಗಳ ವರದಿ ಕೇವಲ ಊಹೆ ಮಾತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಗುಪ್ತಚರ ಇಲಾಖೆಯ ಐಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಾಜ್ಯ ಸರ್ಕಾರ ನೇಮಿಸಿದೆ.
ಸೆಪ್ಟಂಬರ್ 10 ರಂದು ಹೇಳಿಕೆ ನೀಡಿದ್ದ ರೆಡ್ಡಿ, ಹತ್ಯೆ ಸಂಬಂಧ ಎಸ್ ಐಟಿ ಕೆಲಸ ಮಾಹಿತಿಗಳನ್ನು ಕಲೆ ಹಾಕಿದೆ. ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರು ಬಹುಮಾನ ನೀಡುವುದಾಗಿ ಅವರು ಘೋಷಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐ ಟಿ ಅಧಿಕಾರಿ ಎಂ ಎನ್ ಅರುಣ್ ಚೇತಿ, ಪ್ರಕರಣ ನಡೆದ ಸ್ಥಳದಿಂದ ನಮಗೆ ಯಾವುದೇ ವಸ್ತುಗಳು ಸಿಕ್ಕಿಲ್ಲ, ಮಾಧ್ಯಮಗಳ ವರದಿಯಲ್ಲಿ ಯಾವುದೇ ಹುರುಳಿಲ್ಲ, ಒಂದು ವೇಳೆ ನಮಗೆ ಅಂತಹ ಸಾಕ್ಷಿ ಸಿಕ್ಕಿದರೇ , ಮಾಧ್ಯಮಗಳಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.