ರಾಜ್ಯ

ಬೆಂಗಳೂರು: ಗುಂಡಿಗಳನ್ನು ಕಲ್ಲು, ಮಣ್ಣುಗಳಿಂದ ಮುಚ್ಚುವ ಬಿಬಿಎಂಪಿ ಗುತ್ತಿಗೆದಾರರು!

Sumana Upadhyaya
ಬೆಂಗಳೂರು: ನಗರದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ 10 ದಿನಗಳ ಗಡುವು ಮುಗಿಯುತ್ತಾ ಬಂದಿದ್ದು ಆತುರವಾಗಿ ಕೆಲಸ ಮುಗಿಸಲು ಬಿಬಿಎಂಪಿ ಗುತ್ತಿಗೆದಾರರು ಕಟ್ಟಡದ ಪುಡಿಕಲ್ಲುಗಳನ್ನು ತಂದು ಹೊಂಡ-ಗುಂಡಿಗಳಿಗೆ ರಾಶಿ ಹಾಕುತ್ತಿದ್ದಾರೆ.
ಸಹಕಾರನಗರ, ಬೆಂಗಳೂರು ನಗರದ ಕೇಂದ್ರ ಪ್ರದೇಶಗಳಾದ ಮೆಜೆಸ್ಟಿಕ್, ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕಲ್ಯಾಣ್ ನಗರದ ಕೆಲ ಭಾಗಗಳು, ಕೆ.ಆರ್. ಮಾರುಕಟ್ಟೆ, ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ ರಸ್ತೆ, ಸಿರ್ಸಿ ಸರ್ಕರ್ ಕೆಳಗಿನ ಮೇಲ್ಸೇತುವೆ, ಮಾಗಡಿ ರಸ್ತೆ, ಬಸವೇಶ್ವರನಗರದ ಕೆಲ ಪ್ರದೇಶಗಳು, ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತ ರಸ್ತೆಗಳಲ್ಲಿನ ಹೊಂಡ-ಗುಂಡಿಗಳನ್ನು ನಿರ್ಮಾಣ ಕಟ್ಟಡದ ಅವಶೇಷಗಳಿಂದ ಮುಚ್ಚಲಾಗಿದೆ ಎಂದು ಪ್ರಯಾಣಿಕರು ಹೇಳುತ್ತಾರೆ.
ಕೆಲವು ಕಡೆಗಳಲ್ಲಿ ವಾಹನ ಸವಾರರು ಕಲ್ಲುಪುಡಿ ಗುಡ್ಡೆಗಳನ್ನು ತಪ್ಪಿಸಿಕೊಂಡು ಹರಸಾಹಸಪಟ್ಟುಕೊಂಡು ಹೋಗಬೇಕಾಗಿದೆ. ಬಕ್ಷಿ ಗಾರ್ಡನ್ ರಸ್ತೆ, ಗೂಡ್ಸ್ ಶೆಡ್ ರಸ್ತೆ ಮತ್ತು ಬಿನ್ನಿ ಮಿಲ್ಸ್ ರಸ್ತೆ, ಬಿನ್ನಿಸ್ಟನ್ ಗಾರ್ಡನ್ ನಿಂದ ಕಾಟನ್ ಪೇಟೆ ಪ್ರದೇಶಕ್ಕೆ ಬರುವ ರಸ್ತೆಗಳಲ್ಲಿ ಮೋಟಾರು ವಾಹನ ಸವಾರರು ಉಬ್ಬು ತಗ್ಗುಗಳ ರಸ್ತೆಯನ್ನು ತಪ್ಪಿಸಿಕೊಂಡು ಹೋಗಲು ಫುಟ್ ಪಾತ್ ಗಳನ್ನು ಬಳಸುತ್ತಿದ್ದಾರೆ.
ಕೆ.ಆರ್.ಮಾರ್ಕೆಟ್ ಮೂಲಕ ಮೈಸೂರು ಬ್ಯಾಂಕ್ ಸರ್ಕಲ್ ಗೆ ಸಂಪರ್ಕ ಕಲ್ಪಿಸುವ ಅವೆನ್ಯೂ ರಸ್ತೆ ಕಿರಿದಾಗಿದ್ದು ಸಂಚಾರ ದಟ್ಟಣೆ ಅಧಿಕವಾಗಿದೆ.  ಪಾದಚಾರಿ ಮಾರ್ಗಗಳ ಮೇಲೆ, ತಳ್ಳುಗಾಡಿಗಳಲ್ಲಿ ಮತ್ತು ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ.
ಮಳೆ ಬಂದರೆ ಅವೆನ್ಯೂ ರಸ್ತೆಯ ಚರಂಡಿ ನೀರು ಮುಚ್ಚಿಹೋಗಿ ಕೆಲ ಸಮಯಗಳ ನಂತರ ನೀರು ಹಿಂದಕ್ಕೆ ಹೋಗುತ್ತದೆ. ನೀರು ನಿಲ್ಲುವುದರಿಂದ ರಸ್ತೆ ಜಲ್ಲಿಯು ಹಾನಿಗೀಡಾಗಿ ಹಾನಿಕಾರಕ ರಸ್ತೆಗಳಾಗಿ ಮಾರ್ಪಡುತ್ತವೆ. ಬಿಬಿಎಂಪಿಯ ತಾತ್ಕಾಲಿಕ ಜಲ್ಲಿಗಳು ಮತ್ತಷ್ಟು ಹಾನಿಗೀಡಾಗುತ್ತವೆ. ಮಣ್ಣುಗಳೆಲ್ಲಾ ರಸ್ತೆಯಲ್ಲಿ ನಿಂತು ವಾಹನಗಳು ಸ್ಕಿಡ್ ಆಗುತ್ತವೆ ಎಂದು ಅವೆನ್ಯೂ ರಸ್ತೆಯ ಆಭರಣ ವ್ಯಾಪಾರಿ ವಿ.ಆರ್.ಕೃಷ್ಣ ಹೇಳುತ್ತಾರೆ. ಚಿಕ್ಕಪೇಟೆಯಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ.
SCROLL FOR NEXT