ರಾಜ್ಯ

ಗೌರಿ ಲಂಕೇಶ್ ಹತ್ಯೆಯಲ್ಲಿ ನಮ್ಮ ಪಾತ್ರವಿಲ್ಲ, ತನಿಖೆಗೆ ಎಲ್ಲಾ ರೀತಿಯ ಸಹಕಾರ: ಸನಾತನ ಸಂಸ್ಥೆ

Shilpa D
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರವಿಲ್ಲ, ಎಸ್ ಐಟಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಬಲ ಪಂಥೀಯ ಹಿಂದೂ ಸಂಘಟನೆ ಸನಾತನ ಸಂಸ್ಥೆ ಸ್ಪಷ್ಟ ಪಡಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಸನಾತನ ಸಂಸ್ಥೆ  ವಕ್ತಾರ ಚೇತನ್ ರಾಜನ್ ತನಿಖೆ ನಡೆಸುತ್ತಿರುವ ಪೊಲೀಸರು, ಯಾವುದೇ ಪೂರ್ವಾಗ್ರಹಕ್ಕೊಳಪಡದೇ, ಹಾಗೂ ಎಡ ಪಂಥೀಯರ ತಪ್ಪು ಪ್ರಭಾವಕ್ಕೊಳಪಡದೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದೂ ಸಂಘಟನೆಗಳು ಮತ್ತು ಎಡ ಪಂಥೀಯರ ನಡುವೆ ತತ್ವ ಸಿದ್ಧಾಂತಗಳಲ್ಲಿ ವ್ಯತ್ಯಾಸವಿದೆ, ನಾವು ಸಿದ್ದಾಂತಗಳ ಮೂಲಕ ಹೋರಾಟ ನಡೆಸುತ್ತೇವೆ, ನಮಗೂ ಕೊಲೆಗೂ ಯಾವುದೇ ಸಂಬಂಧವಿಲ್ಲ. ಯಾವುದೇ ರೀತಿಯ ತನಿಖೆಗೆ ಸಿದ್ಧ ಹಾಗೂ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಸನಾತನ ಸಂಸ್ಥೆಯ ಆಶ್ರಮದ ಮೇಲೆ ಎಸ್‌ಐಟಿ ದಾಳಿ ಮಾಡಿ, ಕೆಲವರನ್ನು ವಿಚಾರಣೆ ನಡೆಸುತ್ತಿದೆ ಎಂಬ ಸುದ್ದಿ ದೇಶದೆಲ್ಲೆಡೆ ಹರಡಿತ್ತು. ಈ ರೀತಿ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ ಎಂದು ದೂರಿದರು.
ಈ ಪ್ರಕರಣದಲ್ಲಿ ಇದುವರೆಗೂ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಕೂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ ಕೆಲ ರಾಜಕಾರಣಿಗಳು, ಪುರೋಗಾಮಿ ವಿಚಾರವಂತರು ಹಾಗೂ ಪತ್ರಕರ್ತರು ಹಿಂದುತ್ವನಿಷ್ಠ ಸಂಘಟನೆಗಳ ಹೆಸರನ್ನು ಆಗಾಗ್ಗೆ ಉಲ್ಲೇಖಿಸುತ್ತಿದ್ದಾರೆ. ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಹತ್ಯೆಗಳಿಗೂ ಗೌರಿ ಹತ್ಯೆಗೂ ಸಾಮ್ಯತೆ ಇದೆ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ, ಬೇರೆಯವರೂ ಇದೇ ಪದ್ಧತಿ ಅನುಸರಿಸಿ ಹತ್ಯೆ ಮಾಡಿರಬಹುದಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
SCROLL FOR NEXT