ಬೆಂಗಳೂರು: ತವರು ಮನೆಯಿಂದ ಚಿನ್ನಾಭರಣ ತರಲಿಲ್ಲವೆಂಬ ಕಾರಣಕ್ಕೆ ಐರನ್ ಬಾಕ್ಸ್ ನಿಂದ ತನ್ನ ಪತ್ನಿಯ ಗುಪ್ತಾಂಗ ಸುಟ್ಟಿದ್ದಲದೆ ಚಾಕುವಿನಿಂದ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ರೂರಿ ಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಲಿಂಗರಾಜಪುರಂ ನಿವಾಸಿ 26 ವರ್ಷದ ಮಹಿಳೆಯೊಬ್ಬರು ತನ್ನ ಪತಿ ದಿಲೀಪ್ ಕುಮಾರ್(32) ಕಳೆದ ಭಾನುವಾರ ರಾತ್ರಿ ಕುಡಿದು ಬಂದು ತನ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಸುಡುತ್ತಿರುವ ಐರನ್ ಬಾಕ್ಸ್ ನಿಂದ ಸುಟ್ಟಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.
ಕುಡಿದು ಬಂದಿದನ್ನು ಪತ್ನಿ ಪ್ರಶ್ನೆ ಮಾಡಿದ್ದಕ್ಕೆ ಆಕ್ರೋಶಗೊಂಡ ಪತಿ, ತವರು ಮನೆಯಿಂದ ಒಡವೆ ತರದ ನೀನು ನನ್ನನ್ನು ಪ್ರಶ್ನಿಸುತ್ತೀಯಾ ಎಂದು ಬೈದು ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪತಿಯಿಂದ ಹಲ್ಲೆಗೊಳಗಾದ ಪತ್ನಿಯನ್ನು ನಗರದ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ದಿಲೀಪ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.