ರಾಜ್ಯ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೋರ್ವ ಕೈದಿ ಆತ್ಮಹತ್ಯೆಗೆ ಶರಣು!

Srinivasamurthy VN
ಬೆಂಗಳೂರು: ಕೈದಿ ಸೈಕೋ ಶಂಕರ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ  ಬೆನ್ನಲ್ಲೇ ಮತ್ತೊಬ್ಬ ಕೈದಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕೈದಿ ಮಾಸ್ತಿ ಕುಮಾರ್ ಎಂಬಾತ ಜೈಲಿನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಜೈಲಿನ ‘ಎ’ ಬ್ಯಾರಕ್ ನಲ್ಲಿ ನೇಣು ಬಿಗಿದುಕೊಂಡು ಮಾಸ್ತಿ ಕುಮಾರ್​(32 ವರ್ಷ) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಸೆಲ್​ ಒಳಗಿನ ಕಿಟಕಿಗೆ ಪಂಚೆಯಿಂದ ನೇಣುಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಾಸ್ತಿ ಕುಮಾರ್ ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ವರದಕ್ಷಿಣೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಮಾಸ್ತಿ, 10 ತಿಂಗಳಿನಿಂದ ಪರಪ್ಪನ ಅಗ್ರಹಾರದಲ್ಲಿದ್ದ ಎನ್ನಲಾಗಿದೆ.. ಇದಕ್ಕೂ ಮೊದಲು ಶಿವಮೊಗ್ಗದ ಜೈಲಿನಲ್ಲಿ ಮಾಸ್ತಿ ಕುಮಾರ್ ನನ್ನು ಇಡಲಾಗಿತ್ತು. ಪೊಲೀಸ್ ಮೂಲಗಳು ತಿಳಿಸಿರುವಂತೆ ಮಾಸ್ತಿ ಕುಮಾರ್ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಫೆ. 27ರಂದು ಸೈಕೋ ಶಂಕರ್​ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. 
SCROLL FOR NEXT