ಬೆಂಗಳೂರು; ಅಕ್ರಮವಾಗಿ ಚುನಾವಣಾ ಗುರುತಿನ ಚೀಟಿಗಳನ್ನು ಮಾಡಿಕೊಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಪೀಣ್ಯ ಮತ್ತು ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಜಯ್ ಕುಮಾರ್ (29), ನವೀನ್ ಕುಮಾರ್ (30), ಸಚಿನ್ (26), ದೇವರಾಜ್ (25), ಕರಿಸಿದ್ದೇಶ್ವರ (34) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ಅನಧಿಕೃತವಾಗಿ ಚುನಾವಣಾ ಗುರುತಿನ ಚೀಟಿಗಳನ್ನು ತಯಾರು ಮಾಡಲು ಬಳಸುತ್ತಿದ್ದ ಕಂಪ್ಯೂಟರ್ ಸಿಸ್ಟಂಗಳು, ಪೆನ್ ಡ್ರೈವ್, ಹೊಸದಾಗಿ ಚುನಾವಣಾ ಗುರುತಿನ ಚೀಟಿ ಪಡೆಯಲು ಸಲ್ಲಿಸುವ ನಮೂನೆ ನಂ.6ರ ಅರ್ಜಿಗಳು, ಅನಧಿಕೃತವಾಗಿ ತಯಾರಿಸಿರುವ ವೋಟರ್ ಐಡಿಕಾರ್ಡ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಮುಖ ಆರೋಪಿ ಬಿಇ ಪದವೀಧರ ಸಂಜಯ್ ದಾಸರಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿ ಕಂಪ್ಯೂಟರ್ ಅಡ್ಮಿನ್ ಆಗಿದ್ದನು. ನವೀನ್ ದಾಸರಹಳ್ಳಿ ತಾಲೂಕು ಕಚೇರಿಯಲ್ಲಿ ಮತಗಟ್ಟೆಗೆ ಮತದಾರರ ಹೆಸರನ್ನು ಸೇರಿಸುವ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಇಲ್ಲಿ ಕೆಲಸ ಮಾಡುವಾಗ ಆರೋಪಿಗಳು ಇಆರ್'ಎಂಎಸ್ ವೆಬ್ ಸೈಟ್'ನ ಬಳಕೆದಾರರ ಐಡಿ ಹಾಗೂ ಪಾಸ್ ವರ್ಡ್ ಮತ್ತು ಡಿಜಿಟಲ್ ಕೀಗಳನ್ನು ತಿಳಿದುಕೊಂಡಿದ್ದರು. ಕಳೆದ 7 ತಿಂಗಳ ಹಿಂದೆ ನವೀನ್ ನನ್ನು ದುರ್ನಡತೆ ಕಾರಣದಿಂದ ಕೆಲಸದಿಂದ ತೆಗೆದು ಹಾಕಲಾಗಿತ್ತು.
ಬಳಿಕ ನವೀನ್ ಸ್ನೇಹಿತ ಮತ್ತೊಬ್ಬ ಆರೋಪಿ ಸಚಿನ್ ಸೇರಿ ದೊಡ್ಡಬಿದರಕಲ್ಲು ಸಮೀಪ ಸೈಬರ್ ಕೆಫೆ ನಡೆಸುತ್ತಿದ್ದ. ಚುನಾವಣೆ ಹತ್ತಿ ಬರುತ್ತಿರುವ ಹಿನ್ನಲೆಯಲ್ಲಿ ಆರೋಪಿಗಳು ಚುನಾವಣಾ ಗುರುತಿನ ಚೀಟಿ ಮಾಡಿಕೊಟ್ಟು ಸುಲಭವಾಗಿ ಹಣ ಸಂಪಾದಿಸಲು ತೀರ್ಮಾನಿಸಿದ್ದರು. ದಾಸರಹಳ್ಳಿ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್ ಕೂಡ ಅವರೊಂದಿಗೆ ಕೈ ಜೋಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ದಾಸರಹಳ್ಳಿ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅರ್ಜಿ ನಮೂನೆ 6 ಸ್ವೀಕರಿಸದಿದ್ದರೂ ಮತದಾರರ ಪಟ್ಟಿಯಲ್ಲಿ ಅನಧಿಕೃತವಾಗಿ ಅಂತರ್ಜಾಲದ ಮತದಾರ ಹೆಸರು ಸೇರ್ಪಡೆಯಾಗುತ್ತಿತ್ತು. ಈ ಬಗ್ಗೆ ಚುನಾವಣಾಧಿಕಾರಿಗಳಾದ ನಾಗರತ್ನ ಮತ್ತು ಅನಂತರಾಮಯ್ಯ ಅವರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಕಂಡು ಪೊಲೀಸರು ಅಂತರ್ಜಾಲದಲ್ಲಿರುವ ಮತದಾರರ ಮಾಹಿತಿ ಪಡೆದು ಯಾರಿಂದ ಗುರುತಿನ ಚೀಟಿ ಮಾಡಿಸಲಾಗಿದೆ ಎಂಬ ಮಾಹಿತಿ ಕಲೆ ಹಾಕಿದ್ದರು. ಅಲ್ಲದೆ. ಅಲ್ಲಿಂದ ಅಂತರ್ಜಾಲ ಬಳಕೆ ಮಾಡಲಾಗುತ್ತಿದೆ ಎಂಬುದರ ಮಾಹಿತಿ ತಿಳಿದು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos