ರಾಜ್ಯ

ಕರುಣಾನಿಧಿ ನಿಧನ: ಕರ್ನಾಟಕ-ತಮಿಳುನಾಡು ಬಸ್ ಸಂಚಾರ ಬಂದ್

Manjula VN
ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ವಿಧಿವಶರಾಗಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಅಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್'ಟಿಸಿ) ಮತ್ತು ತಮಿಳುನಾಡು ರಾಜ್ಯ ಸಾರಿಗೆ ನಿಗಮಗಳ ಬಸ್'ಗಳ ಕಾರ್ಯಾಚರಣೆ ಮಂಗಳವಾ ಸಂಜೆಯಿಂದಲೇ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. 
ಎರಡೂ ರಾಜ್ಯಗಳ ನಡುವೆ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. 
ನಗರದ ಶಾಂತಿನಗರ ಮತ್ತು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಸಂಜೆ ತಮಿಳುನಾಡಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಬಸ್ ಸಿಗದೆ ಪರದಾಡುವಂತಾಗಿತ್ತು. ಕೋರಮಂಗಲ, ಸಿಲ್ಕ್'ಬೋರ್ಡ್, ಹೆಬ್ಬಗೋಡಿ, ಆನೇಕಲ್ ಗಡಿಯಲ್ಲಿ ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡ ವಿಚಾರ ತಿಳಿದು ನಿರಾಸೆಗೊಂಡರು. 
ಕೆಎಸ್ಆರ್'ಟಿಸಿ ನಿಗಮದ ವ್ಯಾಪ್ತಿಯ ವಿಭಾಗಗಳಿಂದ ನಿತ್ಯ ತಮಿಳುನಾಡು ರಾಜ್ಯಕ್ಕೆ 432 ಬಸ್ ಗಳು ಸಂಚರಿಸುತ್ತವೆ. ಈ ಪೈಕಿ ಚೆನ್ನೈಗೆ 87 ಬಸ್'ಗಳು ಸಂಚರಿಸುತ್ತವೆ. ಇದರಿಂದ ನಿಗಮಕ್ಕೆ ನಿತ್ಯ ರೂ.61.71ಲಕ್ಷ ಆದಾಯ ಬರುತ್ತಿದೆ. 
ಕರುಣಾನಿಧಿ ನಿಧನದ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಕರ್ನಾಟಕದ ಬಸ್ ಗಳಿಂದ ತೊಂದರೆಯಾಗಬಹುದು ಎಂಬ ನಿರೀಕ್ಷೆಯಿಂದ ಸಂಜೆ 6.30ಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
SCROLL FOR NEXT