ರಾಜ್ಯ

ಹಣದ ವಿಚಾರಕ್ಕೆ ಜಗಳ; ಸ್ನೇಹಿತನನ್ನು ಕೊಂದ ಮೂವರ ಬಂಧನ

Manjula VN
ಬೆಂಗಳೂರು: ಹಣಕಾಸು ವಿಚಾರಕ್ಕೆ ನಡೆದ ಜಗಳವೊಂದು ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಯೊಂದು ಶ್ರೀನಿವಾಸ ನಗದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧನಕ್ಕೊಳಪಡಿಸಲಾಗಿದೆ. 
ಅವಿನಾಶ್ ಗೌಡ (21) ಯುವಕನನ್ನು ಕಳೆದ ಭಾನುವಾರ ಕಾಮಾಕ್ಷಿಪಾಳ್ಯದಲ್ಲಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಕುಣಿಗಲ್ ತಾಲೂಕಿನ ಅಮೃತ್ತೂರು ಸಣಬ ಗ್ರಾಮದ ಅಭಿಷೇಕ್ ಅಲಿಯಾಸ್ ಅಭಿ (23), ರಾಜೇಶ (28) ಹಾಗೂ ಮಾದಿಹಳ್ಳಿ ಅರುಣ್ ಕುಮಾರ್ (27) ಎಂಬ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಮತ್ತೊಬ್ಬ ಆರೋಪಿ ಪುನೀತ್ ಎಂಬಾತ ತಲೆಮರೆಸಿಕೊಂಡಿದ್ದಾನೆ. 
ಪ್ರಕರಣದ ಪ್ರಮುಕ ಆರೋಪಿಯಾಗಿರುವ ರಾಜೇಶ್ ಹತ್ಯೆಗೀಡಾಗಿರುವ ಅವಿನಾಶ್'ಗೆ ಹಣ ನೀಡಬೇಕಿತ್ತು. ಹೀಗಾಗಿ ಅವಿನಾಶ್ ಹಣ ನೀಡುವಂತೆ ರಾಜೇಶ್'ಗೆ ಬಲವಂತ ಮಾಡಿದ್ದಾನೆ. ಅವಿನಾಶ್ ಸಂಬಂಧಿಕ ಸತೀಶ್ ಎಂಬಾತ ಹೋಟೆಲ್ ವ್ಯವಹಾರ ನಡೆಸುತ್ತಿದ್ದು, ಶೀಘ್ರಗತಿಯಲ್ಲಿ ಹಣವನ್ನು ನೀಡುವಂತೆ ರಾಜೇಶ್'ಗೆ ಎಚ್ಚರಿಸಿದ್ದಾನೆ. 
ಭಾನುವಾರ ರಾತ್ರಿ ಮೂವರು ಆರೋಪಿಗಳು ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಸತೀಶ್ ಬಂದು ಊಟದ ತಟ್ಟೆಗಳನ್ನು ಎಸೆದು ಹಣವನ್ನು ಹಿಂತಿರುಗಿಸುವಂತೆ ತಿಳಿಸಿದ್ದಾನೆ. ಈ ವೇಳೆ ತೀವ್ರವಾಗಿ ಕೆಂಡಾಮಂಡಲ ಕೊಂಡ ರಾಜೇಶ್ ತನ್ನ ಗೆಳೆಯರಾದ ಅಭಿಷೇಕ್ ಹಾಗೂ ಅರುಣ್ ಜೊತೆ ಸೇರಿ ಅವಿನಾಶ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಘಟನೆ ಬಳಿಕ ಸಣ್ಣಪುಟ್ಟ ಗಾಯಗಳೊಂದಿಗೆ ಸತೀಶ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. 
ಪ್ರಕರಣ ಸಂಬಂಧ ಪೊಲೀಸರು ವಿಶೇಷ ತನಿಖಾ ದಳವನ್ನು ರಚಿಸಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ತಲೆಮರೆಸಿಕೊಂಡಿರುವ ಪುನೀತ್ ಎಂಬಾತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 
SCROLL FOR NEXT