ಬೆಂಗಳೂರು: ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಅವರು ಪ್ರಾಣಿಗಳಿಗೆ ಎಸೆದಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿರುವುದು ಭಾರೀ ಆಕ್ರೋಶ ಹಾಗೂ ಟೀಕೆಗೆ ಕಾರಣವಾಗಿದೆ.
ಭಾನುವಾರ ರಾಮನಾಥಪುರದಲ್ಲಿ ನಿರಾಶ್ರಿತ ಸಮಸ್ಯೆ ಆಲಿಸಲು ಬಂದ ಸಚಿವ ರೇವಣ್ಣ ನಿರಾಶ್ರಿತರೊಂದಿಗೆ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪ್ರವಾಹ ನಿರಾಶ್ರಿತರಿಗೆ ಬಿಸ್ಕೆಟ್ ಎಸೆಯುವ ಮೂಲಕ ಅಮಾನವೀಯತೆಯನ್ನು ಮೆರೆದಿದ್ದಾರೆ. ಶನಿವಾರ ರೇವಣ್ಣ ಮತ್ತು ಎ.ಟಿ. ರಾಮಸ್ವಾಮಿ ಅವರು ಹಾಸನ ಜಿಲ್ಲೆಯ ರಾಮನಾಥಪುರದ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿದ್ದರು. ಆದರೆ ಅಲ್ಲಿ ಪ್ರವಾಹ ಸಂತ್ರಸ್ತರಿಗೆ ಸಚಿವ ರೇವಣ್ಣ ಆಹಾರವನ್ನು ಪ್ರಾಣಿಗಳಿಗೆ ಎಸೆಯೋ ರೀತಿ ಬಿಸ್ಕೆಟ್ ಎಸೆದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಶತಮಾನದ ದಾಖಲೆ ಮಳೆಗೆ ಕಂಗಾಲಾದ ಜನರಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹಾಸನ ಕೆಎಂಎಫ್ನಿಂದ ಉಚಿತವಾಗಿ ಸಾವಿರಾರು ಲೀಟರ್ ಹಾಲು ಮತ್ತು ಬಿಸ್ಕೆಟ್ ಸರಬರಾಜು ಮಾಡಿ ಮಾನವೀಯತೆ ಮೆರೆದಿದ್ದರು. ಆದರೆ, ಭಾನುವಾರ ಗಂಜಿ ಕೇಂದ್ರಕ್ಕೆ ತೆರಳಿದ್ದ ವೇಳೆ ನಿರಾಶ್ರಿತರನ್ನು ಸಚಿವರು ಉಪಚರಿಸಿದ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮನೆ, ನೆಲ ಕಳೆದು ಕೊಂಡು ಆಸರೆಯ ನಿರೀಕ್ಷೆಯಲ್ಲಿರುವ ಜನರು ತಾವು ಗೆಲ್ಲಿಸಿರುವ ಜನಪ್ರತಿನಿಧಿಗಳು ನಮಗೆ ಸಹಾಯ ಮಾಡುತ್ತಾರೆ ಎಂದು ಸಚಿವರನ್ನು ಸುತ್ತುವರೆದಿದ್ದರು. ಆದರೆ, ಮಾನವೀಯತೆ ಮರೆತ ಸಚಿವರು ಸಂತ್ರಸ್ತರೆಡೆಗೆ ಬಿಸ್ಕೆಟ್ ಎಸೆಯುವ ಮೂಲಕ ಪ್ರಾಣಿಗಳಂತೆ ಉಪಚರಿಸಿದ್ದಾರೆ. ತಮ್ಮನ್ನು ಗೆಲ್ಲಿಸಿದ ಇದೇ ಮತದಾರರು ಎಂಬುದನ್ನು ಮರೆತ ರೇವಣ್ಣ ಹೀಗೆ ವರ್ತಿಸಿದ್ದು ಎಷ್ಟು ಸರಿ ಎಂಬ ಟೀಕೆಗಳು ಕೇಳಿಬರುತ್ತಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos