ರಾಜ್ಯ

ಕೊಡಗು ಪ್ರವಾಹ: ಸರ್ಕಾರಕ್ಕೆ ಪುನರ್ವಸತಿಯದ್ದೇ ದೊಡ್ಡ ಸವಾಲು

Sumana Upadhyaya

ಬೆಂಗಳೂರು: ಪ್ರವಾಹಪೀಡಿತ ಕೊಡಗು ಜಿಲ್ಲೆಯಲ್ಲಿನ ಪರಿಸ್ಥಿತಿ ತಿಳಿಯಲು ಮತ್ತು ಅಲ್ಲಿನ ಜನರ ನೋವಿಗೆ ಸ್ಪಂದಿಸಲು ಎರಡು ದಿನಗಳ ಕಾಲ ಸಂಚರಿಸಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಸಂತ್ರಸ್ತ ಜನರಿಗೆ ಪನರ್ವಸತಿ ಕಾರ್ಯ ತಕ್ಷಣವೇ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಜನಜೀವನ ಸಹಜ ಸ್ಥಿತಿಗೆ ಮರಳಲು ಕರ್ನಾಟಕ ಸರ್ಕಾರ ಪುನರ್ವಸತಿ ಕ್ರಮಗಳನ್ನು ಕೈಗೊಂಡಿದ್ದು ಅವುಗಳಲ್ಲಿ ಪರಿಹಾರ ಒದಗಿಸುವುದು, ಉದ್ಯೋಗ, ತಾತ್ಕಾಲಿಕ ಆಶ್ರಯ, ಗೃಹೋಪಯೋಗಿ ವಸ್ತುಗಳ ವಿತರಣೆ ಮತ್ತು ಮನೆ ಕಳೆದುಕೊಂಡವರಿಗೆ ಆಶ್ರಯ ಒದಗಿಸುವ ಕಾರ್ಯವನ್ನು ಕೈಗೊಂಡಿದೆ.

ಪುನರ್ವಸತಿಯ ಮೊದಲ ಕ್ರಮವಾಗಿ ನಿರಾಶ್ರಿತ ಮನೆಗಳಲ್ಲಿ ನೆಲೆಸಿರುವ ಪ್ರತಿ ಕುಟುಂಬಕ್ಕೆ ಸರ್ಕಾರ ತಲಾ 3,800 ರೂಪಾಯಿಗಳನ್ನು ಮಧ್ಯಂತರ ಪರಿಹಾರವೆಂದು ನೀಡುತ್ತಿದೆ. ಪ್ರತಿ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ, 1 ಲೀಟರ್ ಎಣ್ಣೆ, 1 ಕೆಜಿ ತೊಗರಿ ಬೇಳೆ ಮತ್ತು 5 ಲೀಟರ್ ಸೀಮೆ ಎಣ್ಣೆಗಳನ್ನು ನೀಡುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದು 6 ನಿರಾಶ್ರಿತ ಕೇಂದ್ರಗಳನ್ನು ಮುಚ್ಚಲಾಗಿದೆ. ಪರಿಹಾರ ಒದಗಿಸುವುದನ್ನು ಹೊರತುಪಡಿಸಿ ಸರ್ಕಾರ ತಾತ್ಕಾಲಿಕ ಅಲ್ಯೂಮಿನಿಯಂ ಶೆಡ್ ಗಳನ್ನು ಮನೆ ಕಳೆದುಕೊಂಡವರಿಗೆ ನೀಡಲಿದೆ. ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಲು ದೀರ್ಘ ಕಾಲದ ನಿರಾಶ್ರಿತ ಮನೆಗಳಿಗೆ ಜಾಗ ಗುರುತಿಸುವಂತೆ ಕೊಡಗು ಜಿಲ್ಲಾಧಿಕಾರಿಗೆ ಸರ್ಕಾರ ಆದೇಶ ನೀಡಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಅಧಿಕೃತ ಮಾಹಿತಿ ಪ್ರಕಾರ ಮಳೆಗೆ ಇದುವರೆಗೆ 13 ಮಂದಿ ಮೃತಪಟ್ಟಿದ್ದು ಅವರಲ್ಲಿ 12 ಮಂದಿ ಕೊಡಗು ಜಿಲ್ಲೆಯವರೇ ಆಗಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಹಿಮಾಚಲ ಪ್ರದೇಶದ ತಜ್ಞರನ್ನು ಸರ್ಕಾರ ಕೋರಿದೆ. ಭೂ ಕುಸಿತ ಆದ ಸ್ಥಳಗಳಲ್ಲಿ ಭೂ-ತಾಂತ್ರಿಕ ಅಧ್ಯಯನ ನಡೆಸುವಂತೆ ರಾಷ್ಟ್ರೀಯ ಭೂ ವಿಜ್ಞಾನ ಸಂಶೋಧನಾ ಸಂಸ್ಥೆಯ ತಜ್ಞರನ್ನು ಕೋರಲಾಗಿದೆ.

ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನಸಹಾಯ ಮಾಡುವಂತೆ ಕೋರಲಾಗಿದ್ದು ಇದಕ್ಕೆ ದಾನ ಮಾಡಿದವರಿಗೆ 80 ಸಿ ಐಟಿ ಕಾಯ್ದೆಯಡಿ ಸಂಪೂರ್ಣವಾಗಿ ತೆರಿಗೆ ವಿನಾಯ್ತಿಯಿರುತ್ತದೆ.

SCROLL FOR NEXT