ರಾಜ್ಯ

ಮೀಟರ್ ಬಡ್ಡಿಗೆ ಕಡಿವಾಣ: ಬೀದಿ ವ್ಯಾಪಾರಿಗಳಿಗೆ ಸ್ವತಃ ಸಾಲ ನೀಡಲು ಮುಂದಾದ ಸರ್ಕಾರ

Manjula VN
ಬೆಂಗಳೂರು: ಮೀಟರ್ ಬಡ್ಡಿಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ದಿನದ ದುಡಿಮೆಯಲ್ಲಿ ಜೀವನ ನಡೆಸುವ ಬೀದಿ ವ್ಯಾಪಾರಿಗಳಿಗೆ ಸ್ವತಃ ಸಾಲ ನೀಡಲು ಮುಂದಾಗಿದ್ದಾರೆ. 
ಬಡ್ಡಿ ವ್ಯಾಪಾರಿಗಳಿಂದ ಬೆಳಿಗ್ಗೆ ಹಣ ಪಡೆದು ಸಂಜೆ ವೇಳೆ ಮರು ಪಾವತಿ ಮಾಡವ ಸಣ್ಣ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದ ವತಿಯಿಂದಲೇ ನಿತ್ಯ ದುಡಿಮೆ ಬಂಡವಾಳ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. 
ಪ್ರಾಯೋಗಿಕವಾಗಿ ಈ ಯೋಜನೆ ಗಣೇಶ ಚತುರ್ಥಿ ಹಬ್ಬದಂದು ಬೆಂಗಳೂರು ಹಾಗೂ ಮೈಸೂರಿನ ಒಟ್ಟು 10 ಪ್ರದೇಶಗಳಲ್ಲಿ ಜಾರಿಗೆ ಬರಲಿದೆ. 
ಯೋಜನೆಯಿಂದ ಎದುರಾಗುವ ಸಮಸ್ಯೆಗಳನ್ನು ನೋಡಿಕೊಂಡು ಅವುಗನ್ನು ಸರಿಪಡಿಸಿಕೊಕಂಡ ಬಳಿಕ ಇತರೆ ಸ್ಥಳಗಳಿಗೆ ವಿಸ್ತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. 
ಬಡ್ಡಿ ನೀಡುವವರು ಶೇ.2 ರಿಂದ ಶೇ.10ವರೆಗೂ ಬಡ್ಡಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬಡವರಿಗೆ ಒಂದು ದಿನದ ಸಾಲ ನೀಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ನೀಡಬೇಕಾಗಿರುವುದಿಲ್ಲ. ಈ ಕುರಿತಂತೆ ಶೀಘ್ರದಲ್ಲಿಯೇ ಘೋಷಣೆಗಳನ್ನು ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ಹೇಳಿದ್ದಾರೆ. 
ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ಮಾತನಾಡಿ, ಖಾಸಗಿ ಲೇವಾದೇವಿದಾರರು ಬಡವರು ಹಾಗೂ ಬೀದಿ ವ್ಯಾಪಾರಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಒಂದು ದಿನಕ್ಕೆ ಶೇ.10ರಷ್ಟು ಬಡ್ಡಿ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬಡವರಿಗೆ ಸಹಾಯಕವಾಗಲೆಂದು ಯೋಜನೆ ಜಾರಿ ತರಲು ನಿರ್ಧರಿಸಿದ್ದು, ಇದು ಬಡವರಿಗೆ ಕೊಂಚ ನಿರಾಳವನ್ನು ನೀಡಲಿದೆ ಎಂದು ಹೇಳಿದ್ದಾರೆ. 
ಯೋಜನೆ ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. 
SCROLL FOR NEXT