ರಾಜ್ಯ

ಬೆಂಗಳೂರು ಭಾರತದ ನ್ಯಾನೊ ತಂತ್ರಜ್ಞಾನ ಕೇಂದ್ರವಾಗಲಿದೆ: ಹೆಚ್ ಡಿ ಕುಮಾರಸ್ವಾಮಿ

Sumana Upadhyaya

ಬೆಂಗಳೂರು: ಸಾರ್ವಜನಿಕ ವೇದಿಕೆಗಳಲ್ಲಿ ಐಟಿ, ಬಿಟಿ ಬಗ್ಗೆ ಮಾತನಾಡುವ ಬದಲು ವಿಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಕುಶಲತೆಯನ್ನು ಉಲ್ಲೇಖಿಸಿ ಎಂದು ಖ್ಯಾತ ವಿಜ್ಞಾನಿ ಪ್ರೊ ಸಿ ಎನ್ ಆರ್ ರಾವ್ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದಾರೆ. 10ನೇ ಬೆಂಗಳೂರು ಇಂಡಿಯಾ ನ್ಯಾನೊ 2018 ಉದ್ಘಾಟನೆ ಕಾರ್ಯಕ್ರಮದ ವೇಳೆ ಅವರು ಮಾತನಾಡುತ್ತಿದ್ದರು.

ನಾಳೆಯವರೆಗೆ ನಡೆಯುತ್ತಿರುವ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯಕ್ರಮ ಇದಾಗಿದ್ದು ವಿಜ್ಞಾನ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿನ 600ಕ್ಕೂ ಹೆಚ್ಚು ಗಣ್ಯರು, ತಜ್ಞರು ಭಾಗವಹಿಸುತ್ತಿದ್ದಾರೆ. ನಿನ್ನೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈ ಕಾರ್ಯಕ್ರಮ ಉದ್ಘಾಟಿಸಿದರು.

ಘನ-ಸ್ಥಿತಿ ಮತ್ತು ರಚನಾತ್ಮಕ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪ್ರೊ ಸಿ ಎನ್ ಆರ್ ರಾವ್ ಭಾರತ ರತ್ನ ಪ್ರಶಸ್ತಿ ಪುರಸ್ಕೃತರೂ ಹೌದು. ನಾನೊ ತಂತ್ರಜ್ಞಾನದ ವಿಷನ್ ಗ್ರೂಪ್ ನ ಅಧ್ಯಕ್ಷರು ಕೂಡ ಆಗಿದ್ದಾರೆ. ಈ ಕಾರ್ಯಕ್ರಮದ ಆರಂಭದಿಂದಲೇ ಇದರ ಸಂಘಟಕರಲ್ಲಿ ಒಬ್ಬರು.

ಈ ಸಂದರ್ಭದಲ್ಲಿ ಮಾತನಾಡಿದ ರಾವ್, ನ್ಯಾನೊ ತಂತ್ರಜ್ಞಾನದಲ್ಲಿ ಕರ್ನಾಟಕ ಮಾತ್ರ ಇಂತಹ ಕಾರ್ಯಕ್ರಮ ನಡೆಸುತ್ತಿದೆ. ಮಾನವ ಜನಾಂಗ ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಈ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸಗಳ ಮೂಲಕ ಬಗೆಹರಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಡಾ ಎಸ್ ಸಂಪತ್  ಅವರನ್ನು ಸಿ ಎನ್ ಆರ್ ರಾವ್ ಫೌಂಡೇಶನ್ 1 ಲಕ್ಷ ರೂಪಾಯಿ ನಗದಿನೊಂದಿಗೆ ಇಂಡಿಯಾ ನ್ಯಾನೊ ವಿಜ್ಞಾನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನ್ಯಾನೊ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು ದೇಶದಲ್ಲಿ ಬೆಂಗಳೂರು ನ್ಯಾನೊ ತಂತ್ರಜ್ಞಾನ ಕೇಂದ್ರವಾಗಿ ಮಾರ್ಪಾಡಾಗುತ್ತದೆ ಎಂಬ ವಿಶ್ವಾಸವಿದೆ ಎಂದು ನುಡಿದರು. ಬೆಂಗಳೂರು ಭಾರತದ ವಿಜ್ಞಾನದ ರಾಜಧಾನಿ ಎಂದು ಕೂಡ ಬಣ್ಣಿಸಿದರು.

SCROLL FOR NEXT