ಬೆಂಗಳೂರು: ತುರ್ತು ದುರಸ್ತಿ ಕಾಮಗಾರಿ ಹಿನ್ನಲೆಯಲ್ಲಿ ಬೆಂಗಳೂರಿನ ಸಿರ್ಸಿ ವೃತ್ತದಲ್ಲಿರುವ ಮೇಲ್ಸೇತುವೆಯನ್ನು 4 ತಿಂಗಳ ಕಾಲ ಬಂದ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಸಿರ್ಸಿ ವೃತ್ತದಿಂದ ಸಿಟಿ ಮಾರುಕಟ್ಟೆ ಹಾಗೂ ಟೌನ್ ಹಾಲ್ ವರೆಗೂ ಸಂಪರ್ಕ ಕಲ್ಪಿಸುವ ಸುಮಾರು 2.6 ಕಿಮೀ ಉದ್ಧದ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ಬಂದ್ ಮಾಡಲಾಗತ್ತಿದೆ. ಸುಮಾರು 4 ತಿಂಗಳ ಕಾಲ ಕಾಮಗಾರಿ ನಡೆಯಲಿದ್ದು, ಈ ವೇಳೆ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರ ನಿಷೇಧಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇದೇ ಡಿಸೆಂಬರ್ 26ರಿಂದಲೇ ಕಾಮಗಾರಿ ಆರಂಭವಾಗುತ್ತಿದ್ದು, ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲು ಸುಮಾರು 4 ತಿಂಗಳ ಕಾಲವಕಾಶ ಬೇಕಾಗುತ್ತದೆ, ಅಂತೆಯೇ ಕಾಮಗಾರಿಗೆ ಸುಮಾರು 4.30 ಕೋಟಿ ರೂ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ. ದುರಸ್ತಿ ಕಾರ್ಯದ ವೇಳೆ ಮೇಲ್ಸೇತುವೆ ಮೇಲಿನ ಟಾರ್ ಅನ್ನು ಸಂಪೂರ್ಣವಾಗಿ ತೆಗೆದು, ಮೇಲ್ಸೇತುವೆ ಮೇಲಿನ ಕ್ರಾಕ್ ಗಳನ್ನು ಕಾಂಕ್ರೀಟ್ ಮೂಲಕ ಮುಚ್ಚಲಾಗುತ್ತದೆ. ಆ ಬಳಿಕ ಹೊಸ ಟಾರ್ ಹಾಕಿ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಎಂಜಿನಿಯರ್ ಕೆಟಿ ನಾಗರಾಜ್ ಅವರು, ಮೇಲ್ಸೇತುವೆಯ ಎರಡು ಬದಿಯನ್ನು ಮುಚ್ಚಿ ಕಾಮಗಾರಿ ನಡೆಸುವುದು ಉದ್ದೇಶವಾಗಿದೆ. ಆದರೆ ಟ್ರಾಫಿಕ್ ಪರಿಸ್ಥಿತಿಯನ್ನು ನೋಡಿಕೊಂಡು ಎರಡೂ ಬದಿಯನ್ನು ಮುಚ್ಚಬೇಕೆ ಅಥವಾ ಒಂದು ಕಡೆ ಸಂಚಾರಕ್ಕೆ ಅನುವು ಮಾಡಿಕೊಟ್ಟು ಮತ್ತೊಂದು ಬದಿಯಲ್ಲಿ ಕಾಮಗಾರಿ ನಡೆಸಬೇಕೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಮುಂಬೈ ನಿಂದ ಯಂತ್ರಗಳು ಇಲ್ಲಿಗೆ ಬರಬೇಕಿದೆ ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics