ಚಾಮರಾಜನಗರ: ದೇಶವನ್ನೇ ಬೆಚ್ಚಿ ಬೀಳಿಸಿದ್ದ 15 ಅಮಾಯಕ ಭಕ್ತರನ್ನು ಬಲಿ ಪಡೆದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ದುರಂತ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರು ಬುಧವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶರತ್ ಚಂದ್ರ ಅವರು, ಮಾರಮ್ಮನ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸುವುದಾಗಿ ತಿಳಿಸಿದರು.
ಪ್ರಕರಣದಲ್ಲಿ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ 1ನೇ ಆರೋಪಿಯಾಗಿದ್ದು, ಟ್ರಸ್ಟ್ ವ್ಯವಸ್ಥಾಪಕ ಮಾದೇಶ ಎರಡನೇ ಹಾಗೂ ಮಾದೇಶನ ಪತ್ನಿ ಅಂಬಿಕಾ ಮೂರನೇ ಮತ್ತು ದೊಡ್ಡಯ್ಯ ನಾಲ್ಕನೇ ಆರೋಪಿಯಾಗಿದ್ದಾರೆ ಎಂದು ಹೇಳಿದರು.
ಟ್ರಸ್ಟ್ ಪದಾಧಿಕಾರಿಗಳ ನಡುವಿನ ವೈಮನಸ್ಯದಿಂದಾಗಿ ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ಚಿನ್ನಪ್ಪಿ ಬಣಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಈ ಸಂಚು ರೂಪಿಸಲಾಗಿದೆ. ಇದಕ್ಕೆ ಮಹದೇವಸ್ವಾಮಿ ಮಾದೇಶ, ಆತನ ಪತ್ನಿ ಅಂಬಿಕಾ ಮತ್ತು ದೊಡ್ಡಯ್ಯನನ್ನು ಬಳಸಿಕೊಂಡಿದ್ದಾರೆ ಎಂದು ಶರತ್ ಚಂದ್ರ ಅವರು ತಿಳಿಸಿದರು.
ಅಂಬಿಕಾ ತನ್ನ ಮನೆಯಲ್ಲಿ ಸಸ್ಯಗಳನ್ನು ಬೆಳೆಸಿರುವುದಾಗಿ ಹೇಳಿ, ತನಗೆ ಗೊತ್ತಿರುವ ಕೃಷಿ ಅಧಿಕಾರಿಯೊಬ್ಬರಿಂದ ಕೀಟನಾಶಕ ತರಿಸಿಕೊಂಡಿದ್ದು, ಅದನ್ನು ತನ್ನ ಪತಿ ಮಾದೇಶನಿಗೆ ನೀಡಿದ್ದಾರೆ. ಮಾದೇಶ ಕೀಟನಾಶಕವನ್ನು ದೊಡ್ಡಯ್ಯಗೆ ನೀಡಿ ಪ್ರಸಾದಕ್ಕೆ ಬೆರೆಸಿದ್ದಾರೆ ಎಂದು ಐಜಿಪಿ ಹೇಳಿದ್ದಾರೆ.
ಮಾರಮ್ಮ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಮಹಾದೇವಸ್ವಾಮಿ, ಮಾರಮ್ಮ ದೇವಾಲಯವನ್ನು ಪೂರ್ಣವಾಗಿ ತಮ್ಮ ವಶಮಾಡಿಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ ಟ್ರಸ್ಟ್ ನ ಸದಸ್ಯರು ಅವರ ವಿರುದ್ಧ ನಡೆದುಕೊಳ್ಳುತ್ತಿದ್ದರು. ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಇಮ್ಮಡಿ ಮಹಾದೇವ ಸ್ವಾಮಿಯನ್ನೂ ಕರೆಯದೆ ಡಿಸೆಂಬರ್ 14 ರಂದು ಗೋಪುರ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮ ನಿಗದಿ ಮಾಡಿದೆ. ಇದರಿಂದ ಆಕ್ರೋಶಗೊಂಡ ಇಮ್ಮಡಿ ಮಹಾದೇವಸ್ವಾಮಿ ತನ್ನ ಸಂಗಡಿರೊಂದಿಗೆ ಸೇರಿ ಅದೇ ದಿನ ಪ್ರಸಾದದಲ್ಲಿ ವಿಷ ಬೆರೆಸುವಂತೆ ಮಾಡಿದ್ದಾನೆ ಎಂದರು.
ಮಹದೇವಸ್ವಾಮಿ ಜೊತೆಗೆ ಅಂಬಿಕಾಗೆ ಅನೈತಿಕ ಸಂಬಂಧವಿತ್ತು ಎಂಬುದು ಸಹ ತನಿಖೆಯಿಂದ ತಿಳಿದು ಬಂದಿದ್ದು, ಮಹದೇವಸ್ವಾಮಿ, ಮಾದೇಶ್ ಹಾಗೂ ಆತನ ಪತ್ನಿ ಅಂಬಿಕಾಗೆ ಸಾಕಷ್ಟು ಹಣದ ಸಹಾಯ ಮಾಡಿದ್ದರು. ಅಂಬಿಕಾಗೆ ಮನೆ ಸಹ ಲೀಜ್ಗೆ ಹಾಕಿಸಿಕೊಟ್ಟಿದ್ದ, ಅಲ್ಲದೆ ಮಾದೇಶನಿಗೆ ಮಾರಮ್ಮನ ದೇವಾಲಯದಲ್ಲಿ ಕೆಲಸ ಕೊಡಿಸಿದ್ದರು ಎಂದು ಐಜಿಪಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos