ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸೃಷ್ಟಿಸಿರೋ ಹವಾ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿದೆಯಾದರೂ, ಇಂತಹುದೊಂದು ಅವರೂಪದ ಚಿತ್ರಕ್ಕೆ ಸಾಕ್ಷಿಯಾಗಿದ್ದ ಕೆಜಿಎಫ್ ಕುರಿತು ನಿಮಗೆ ತಿಳಿಯದ ಒಂದಷ್ಟು ಅಂಶಗಳು ಇಲ್ಲಿವೆ.
ಕೆಜಿಎಫ್ ಚಿತ್ರದಂತೆಯೇ ಆ ಊರಿನ ಹೆಸರು ಭಾರತೀಯ ಇತಿಹಾಸದಲ್ಲಿ ಅತ್ಯಂತ ವೈಭವೋಪೇತ ಹೆಸರಾಗಿ ಉಳಿದಿದೆ. ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿಯವರು ಇದೇ ಕೆಜಿಎಫ್ ನ ಮಣ್ಣಿನವರು.
ಕರ್ನಾಟಕದಲ್ಲಿ ವಿದ್ಯುಚ್ಛಕ್ತಿಯನ್ನು ಪಡೆದ ಮೊಟ್ಟ ಮೊದಲ ನಗರ ಕೆಜಿಎಫ್. ಹಾಗೇ ದೇಶದಲ್ಲಿ ವಿದ್ಯುತ್ ಪಡೆದ ಮೂರನೇ ನಗರ ಕೂಡ ಕೆಜಿಎಫ್. 1902ರಲ್ಲೇ ಕೆಜಿಎಫ್ನ ಬೀದಿ ಬೀದಿಗಳು ವಿದ್ಯುತ್ ಲೈಟ್ ಗಳಿಂದ ಬೆಳಗುತ್ತಿದ್ದವು.
ಆಂದಿನ ಕಾಲಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಾಗಲಿ, ಬೆಂಗಳೂರು, ಮೈಸೂರಿನಲ್ಲಾಗಲಿ ವಿದ್ಯುಚ್ಛಕ್ತಿ ಇರಲಿಲ್ಲ. ಕರೆಂಟ್ ಅಂದರೆ ಏನು ಎನ್ನುವುದೇ ಸಾಮಾನ್ಯ ಜನತೆಗೆ ಗೊತ್ತಿರಲಿಲ್ಲ. ಅಂತಾ ಸಮಯದಲ್ಲಿ ಕೆಜಿಎಫ್ ನಲ್ಲಿ ಬೀದಿ ದೀಪಗಳು ಬೆಳಗುತ್ತಿದ್ದವು. ಇದಿಷ್ಟೇ ಅಲ್ಲ, ದೇಶದಲ್ಲೇ ಮೊಟ್ಟ ಮೊದಲ ರೈಲ್ವೆ ಹಳಿಗಳನ್ನು ಹೊಂದುವ ಮೂಲಕ ದೇಶದ ಮೊದಲ ರೈಲು ಸಂಪರ್ಕ ಪಡೆದ ನಗರ ಕೂಡ ಇದೇ ಕೆಜಿಎಫ್.
1902ರಲ್ಲಿ ಕರ್ನಾಟಕದ ಶಿವನಸಮುದ್ರದಲ್ಲಿ ದೇಶದ ಮೊಟ್ಟ ಮೊದಲ ಪ್ರಮುಖ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ಸ್ಥಾಪನೆ ಮಾಡಲಾಯಿತು. ಸುಮಾರು 4.5 ಮೆಗಾವ್ಯಾಟ್ ಸಾಮರ್ಥ್ಯದ ಪವರ್ ಸ್ಟೇಷನ್ ನಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಕೋಲಾರದ ಗೋಲ್ಡ್ ಫೀಲ್ಡ್ಸ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಬ್ರಿಟೀಷ್ ಕಂಪನಿ ಈ ಘಟಕವನ್ನು ನಡೆಸುತ್ತಿತ್ತು.
ಇದಕ್ಕೂ ಮೊದಲು 1897ರಲ್ಲಿ ಡಾರ್ಜಿಲಿಂಗ್ ನಲ್ಲಿ 130 ಕಿಲೋ ವ್ಯಾಟ್ ಸಾಮರ್ಥ್ಯದ ಹೈಡ್ರೋ ಪವರ್ ಪ್ಲಾಂಟ್ ಕಾರ್ಯಾರಂಭ ಮಾಡಿತ್ತು.