ರಾಜ್ಯ

ಸಾಧು ಸ್ವಭಾವದವನೆಂದು ಕೆಲಸದಿಂದ ತೆಗೆದ ಕಂಪನಿ: ನೊಂದ ಟೆಕ್ಕಿ ಆತ್ಮಹತ್ಯೆಗೆ ಶರಣು

Manjula VN
ಬೆಂಗಳೂರು: ಸಾಧು ಸ್ವಭಾವದವನು ಎಂದು ಹೇಳಿ ಕಂಪನನಿಯು ಕೆಲಸದಿಂದ ತೆಗೆದು ಹಾಕಿದ್ದ ಕಾರಣ, ಇದರಿಂದ ತೀವ್ರವಾಗಿ ನೊಂದ ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. 
ಮೈಕೋ ಲೇಔಟ್ ನಿವಾಸಿಯಾಗಿದ್ದ ವಿಶ್ವಾಸ್ (27) ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಮನೆಯಿಂದ ಹೊರ ಹೋದ ವಿಶ್ವಾಸ್, ಮಡಿವಾಳ ಕೆರೆಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಮರುದಿನ ಕೆರೆಯಲ್ಲಿ ಅಪರಿಚಿತ ಮೃತದೇಹ ನೋಡಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲಿಸಿದಾಗ ಮೃತನ ಗುರುತು ಪತ್ತೆಯಾಗಿದೆ. ಮೃತ ವಿಶ್ವಾಸ್ ದಾವಣಗೆರೆ ಜಿಲ್ಲೆಯವರಾಗಿದ್ದು, ತನ್ನ ಅಣ್ಣ ಮತ್ತು ತಾಯಿ ಜೊತೆಗೆ ಮೈಕೋ ಲೇಐಟ್ ನಲ್ಲಿ ನೆಲೆಸಿದ್ದ. 
ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿದ ಬಳಿಕ ವಿಶ್ವಾಸ್, ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ, ತನ್ನ ಕೆಳ ಹಂತದ ಸಿಬ್ಬಂದಿಯಿಂದ ಸರಿಯಾಗಿ ಕೆಲಸ ತೆಗೆಸುವಲ್ಲಿ ಆತ ವಿಫಲನಾಗಿದ್ದ. 
ಕೊನೆಗೆ ಕಂಪನಿಯ ಆಡಳಿತ ಮಂಡಳಿಯವರು, ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ನೀಡಿ ವಿಶ್ವಾಸ್ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. 
ಇನ್ನೂ ಕೆಲಸದಿಂದ ತೆಗೆಯುವ ಮುನ್ನ ವಿಶ್ವಾಸ್ ಪೋಷಕರನ್ನು ಸಹ ಕಂಪನಿಗೆ ಕರೆಸಿಕೊಂಡಿದ್ದ ಆಡಳಿತ ಮಂಡಳಿಯವರು, ನಮ್ಮದು ಪ್ರೊಡಕ್ಷನ್ ಕಂಪನಿ, ಇಲ್ಲಿ ಜೋರಾಗಿ ಮಾತನಾಡಿ ಕಾರ್ಮಿಕರಿಂದ ಕೆಲಸ ತೆಗೆಸಬೇಕಿದೆ. ಆದರೆ, ನಿಮ್ಮ ಮಗ ತುಂಬಾ ಮೃದು ಸ್ವಭಾವದ ವ್ಯಕ್ತಿ. ಹೀಗಾಗಿ ಇಲ್ಲಿ ಅವರಿಗೆ ಕಾರ್ಯನಿರ್ವಹಿಸಲು ಕಷ್ಟವಾಗುತ್ತದೆ ಎಂದಿದ್ದು, ಈ ಮಾತಿಗೆ ಕುಟುಂಬದವರು ಸಹ ಸಮ್ಮತಿಸಿದ್ದರು. ಇದಾದ ನಂತರವೇ ವಿಶ್ವಾಸ್ ಅವರನ್ನು ಕಂಪನಿಯವರು ನೌಕರಿಯಿಂದ ಬಿಡುಗಡೆಗೊಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. 
ಉದ್ಯೋಗ ಕಳೆದುಕೊಂಡಿದ್ದ ವಿಶ್ವಾಸ್ ಅವರಿಗೆ ಬಳಿಕ ಬೇರೆಲ್ಲೂ ಕೆಲಸ ಸಿಗಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
SCROLL FOR NEXT