ಬೆಂಗಳೂರು: ಸಚಿವ ಸಂಪುಟ ಪುನರ್ ರಚನೆ ಶಿಫಾರಸು ಪಟ್ಟಿಗೆ ಒಪ್ಪಿಗೆ ನೀಡಿ ರಾಜ್ಯಪಾಲರಿಗೆ ರವಾನಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ನಿಗಮ-ಮಂಡಳಿ ನೇಮಕಾತಿ ಪಟ್ಟಿಗೆ ಮಾತ್ರ ಒಪ್ಪಿಗೆ ನೀಡದೆಯೇ ಶುಕ್ರವಾರ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾರೆ. ಈ ಮೂಲಕ ನಿಗಮ ಮಂಡಳಿ ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ.
ಕುಮಾರಸ್ವಾಮಿಯವರು ನಿಗಮ ಮಂಡಳಿ ನೇಮಕಾತಿ ಪಟ್ಟಿಗೆ ಸಹಿ ಹಾಕದೆ ವಿದೇಶಕ್ಕೆ ತೆರಳಿರುವುದು ಮೈತ್ರಿ ಪಕ್ಷಗಳ ನಡುವೆ ಮೂಡಿರುವ ಬಿರುಕು ಬಹಿರಂಗಗೊಂಡಂತಾಗಿದೆ.
ದೋಸ್ತಿ ಸರ್ಕಾರದಲ್ಲಿ ಯಾವುದೇ ರೀತಿಯ ಅಸಮಾಧಾನಗಳಿಲ್ಲ ಎಂದು ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ. ಆದರೆ, ನಿಮಗ ಮಂಡಳಿ ನೇಮಕಾತಿ ಕುರಿತು ಕುಮಾರಸ್ವಾಮಿಯವರ ನಡೆಯಿಂದ ಬಿರುಕುಗಳು ಮೂಡುವ ಲಕ್ಷಣಗಳು ಕಂಡು ಬರುತ್ತಿವೆ. ಕುಮಾರಸ್ವಾಮಿಯವರು ವಿದೇಶ ಪ್ರವಾಸಕ್ಕೆ ತೆರಳಿರುವುದರಿಂದ ನಿಗಮ ಮಂಡಳಿ ನೇಮಕಾತಿಯು ಜ.2ರವರೆಗೆ ಮುಂದಕ್ಕೆ ಹೋಗಿದೆ.
ವಿದೇಶದಿಂದ ವಾಪಸ್ಸಾದ ಬಳಿಕವಷ್ಟೇ ಈ ಕುರಿತು ಸಮಾಲೋಚನೆ ನಡೆಸಿ ಕುಮಾರಸ್ವಾಮಿಯವರು ತೀರ್ಮಾನ ಕೈಗೊಳ್ಳಲಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.