ಶ್ರೀರಂಗಪಟ್ಟಣ: ಬಿಗಿ ಭದ್ರತೆಯುಳ್ಳ ಕೆಆರ್'ಎಸ್ ಜಲಾಶಯದ ಹಿನ್ನೀರಿನಲ್ಲಿ ಉದ್ಯಮಿಯೊಬ್ಬರು ಕಾರು ಚಲಾಯಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತೀವ್ರ ಆಕ್ಷೇಪಗಳು ವ್ಯಕ್ತವಾಗತೊಡಗಿದೆ.
ಉದ್ಯಮಿಯೊಬ್ಬರಿಗೆ ಈ ರೀತಿ ಬಿಗಿಭದ್ರತೆಯುಳ್ಳ ಜಲಾಶಯದ ಹಿನ್ನೀರಿನಲ್ಲಿ ಕಾರು ಚಲಾಯಿಸಲು ಅವಕಾಶ ನೀಡುವ ಮೂಲಕ ಭದ್ರತಾ ಲೋಕ ಎಸಲಾಗಿದೆ ಎನ್ನುವ ಆರೋಪ ಇದೀಗ ಕೇಳಿಬರತೊಡಗಿದೆ.
ಕಾರು ಚಲಾಯಿಸಿರುವ ವ್ಯಕ್ತಿಯನ್ನು ಮೈಸೂರಿನ ಉದ್ಯಮಿ ವಿಕ್ರಮ್ ಗುಪ್ತಾ ಎಂದು ಹೇಳಲಾಗುತ್ತಿದೆ. ಕೆಆರ್'ಎಸ್ ಜಲಾಶಯದ ಹೊಸಕನ್ನಂಬಾಡಿ ಗ್ರಾಮದ ವೇಣುಗೋಪಾಲ ದೇಗುಲದ ಬಳಿ ಅವರು ಈ ರೀತಿಯ ದುಸ್ಸಾಹಸ ಪ್ರದರ್ಶಿಸಿದ್ದಾರೆಂದು ತಿಳಿದುಬಂದಿದೆ.
ಮಂಡ್ಯ ಜಿಲ್ಲ ಶ್ರೀರಂಗಪಟ್ಟಣದ ತಾಲೂಕಿನಲ್ಲಿರುವ ಕೆಆರ್'ಎಸ್ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಹಿನ್ನೀರು ಸೇರಿದಂತೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ಯಾವುದೇ ವಾಹನ ಓಡಾಡಲು, ಮೋಜು-ಮಸ್ತಿ ಮಾಡುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಜಲಾಯಶಕ್ಕೆ ಬಿಗಿ ಭದ್ರತೆಯನ್ನೂ ಒದಗಿಸಲಾಗಿದೆ. ಆದರೂ ಉದ್ಯಮಿಯೊಬ್ಬರು ಈ ರೀತಿ ಹಿನ್ನೀರಿನಲ್ಲಿ ಕಾರು ಜಲಾಯಿಸಲು ಅವಕಾಶ ನೀಡಿದ್ದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.