ರಾಜ್ಯ

ಸಂತೋಷ್ ಹತ್ಯೆ ಹಿಂದೆ ಯಾವ ಕೋಮುದ್ವೇಷ ಅಥವಾ ರಾಜಕೀಯವಿಲ್ಲ, ಕರ್ನಾಟಕ ಪೋಲೀಸ್ ಸ್ಪಷ್ಟನೆ

Raghavendra Adiga
ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಕೇಂದ್ರೀಯ ಅಪರಾಧ ತನಿಖಾ ದಳ (ಸಿಸಿಬಿ), ಈ ಹತ್ಯೆ ಯಾವ ಕೋಮು ದ್ವೇಷ ಅಥವಾ ರಾಜಕೀಯ ವೈಶಮ್ಯದಿಂದ ಸಂಭವಿಸಿಲ್ಲ. ಇದು ಕೇವಲ ಹಳೆಯ ವೈಯಕ್ತಿಕ ದ್ವೇಷದಿಂದಾಗಿ ಉಂಟಾಗಿದೆ ಎಂದು ತೀರ್ಮಾನಕ್ಕೆ ಬಂದಿದೆ. ಅಲ್ಲದೆ ಈ ಹಿಂದೆ ಹೇಳಿದ್ದಂತೆ ಸಂತೋಷ್ ಕೊಲೆಗಾಗಿ ಸ್ಕ್ರೂ ಡ್ರೈವರ್ ಬಳಸಿಲ್ಲ, ಚಾಕುವಿನಿಂದ ತಿವಿದು ಹತ್ಯೆ ಮಾಡಲಾಗಿದೆ ಎಂದು ಸಿಸಿಬಿ ತನಿಖೆಯಲ್ಲಿ ಕಂಡುಬಂದಿದೆ.
ಸಂತೋಷ್ ಹತ್ಯೆ ನಡೆದ ಒಂದು ದಿನದ ತರುವಾಯ ನಗರದ ಪೊಲೀಸ್ ಕಮೀಷನರ್ ಟಿ ಸುನೀಲ್ ಕುಮಾರ್ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ್ದರು. ಇದೀಗ ಸಿಸಿಬಿ ಪೋಲೀಸರು ವಾಸಿಮ್, ಫಿಲಿಪ್ಸ್, ಇರ್ಫಾನ್ ಮತ್ತು ಉಮರ್ - ನಾಲ್ವರು ಶಂಕಿತರನ್ನು ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ.
"ಸಂತೋಷ್ ಅಹತ್ಯೆಯು ವೈಯುಕ್ತಿಕ ದ್ವೇಷದ ಕಾರಣದಿಂದ ಉಂತಾಗಿದೆ. ವಾಸಿಂ ಮತ್ತು ಆತನ ಸಹಚರರು ಗಾಂಜಾ, ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದು ಇದನ್ನು ಪ್ರಶ್ನಿಸಿದ್ದ ಸಂತೋಷ್ ಮೇಲೆ ವಾಸಿಂ ಗೆ ಕೋಪವಿತ್ತು. ಈ 2-3 ತಿಂಗಳ ಹಿಂದೆಯೇ ವಾಸಿಂ ಸಂತೋಷ್ ಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸಲು ಯೋಜಿಸುತ್ತಿದ್ದ" ಹೆಸರು ಬಹಿರಂಗಪಡಿಸಲು ಇಚ್ಚಿಸದ ಓರ್ವ ಅಧಿಕಾರಿ ಹೇಳಿದ್ದಾರೆ.
"ಕೊಲೆಗೆ ಕೆಲವು ದಿನಗಳ ಮೊದಲು ಸಂತೋಷ್ ಕಿರಿಯ ಸಹೋದರನೊಂದಿಗೆ ವಾಸಿಮ್ ಜಗಳ ನಡೆಸಿದ್ದರು. ಅಲ್ಲದೆ, ಸಂತೋಷ್ ಕೊಲೆಯಾಗುವ ಒಂದು ದಿನ ಮುನ್ನ ವಾಸಿಂನ ಸೋದರಳಿಯನೊಡನೆ ವಾದಕ್ಕಿಳಿದಿದ್ದರು. ಈ ಘಟನೆಗಳು ಇಬ್ಬರ ನಡುವೆ ಇನ್ನಷ್ಟು ದ್ವೇಷ ಹುಟ್ಟಲು ಕಾರಣವಾಗಿತ್ತು." ಅಧಿಕಾರಿಗಳು ಹೇಳಿದ್ದಾರೆ.
"ಆಪಾದಿತ ವ್ಯಕ್ತಿಯ ಮನೆಯೊಂದರಲ್ಲಿ ಹತ್ಯೆಗೆ ಬಳಸಿದ್ದ ಚಾಕು ಸಿಕ್ಕಿದೆ. ಸಂತೋಷ್ ಗೆ ಚಾಕುವಿನಿಂದ ಇರಿಸಲಾಗಿತ್ತು ಮತ್ತು ಆ ಚಾಕುವನ್ನು ಸಿಸಿಬಿ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿಚಾರಣೆ ಮುಗಿದ ನಂತರ, ನಾವು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ತನಿಖೆಯ ವ್ಯಾಪ್ತಿ ನೋಡಿಕೊಂಡು ಒಂದು ಅಥವಾ ಎರಡು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುತ್ತೇವೆ." ಸಿಸಿಬಿ ಮೂಲಗಳು ಹೇಳಿದೆ.
ಜೆ.ಸಿ.ನಗರದಲ್ಲಿನ ಚಿನ್ನಪ್ಪ ಗಾರ್ಡನ್ ನಿವಾಸಿ, ಬಿಜೆಪಿ ಕಾರ್ಯಕರ್ತರಾಗಿದ್ದ  ಸಂತೋಷ್ (28) ಜನವರಿ 31ರ ಸಂಜೆ ತಮ್ಮ ಮನೆಯ ಸಮೀಪ ಹತ್ಯೆಗೊಳಗಾಗಿದ್ದರು.
SCROLL FOR NEXT