ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಹಾಗೂ ವಾಹನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಆರಂಭಿಸಿರುವ ವಿರಳ ಸಂಚಾರ ದಿನ ಅಭಿಯಾನವನ್ನು ದೇಶದ ವಿವಿಧ ರಾಜ್ಯಗಳಲ್ಲೂ ಜಾರಿಗೊಳಿಸುವಂತೆ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬುಧವಾರ ಮನವಿ ಮಾಡಿಕೊಂಡಿದ್ದಾರೆ.
ಫೆ.11ರಂದು ಬೆಂಗಳೂರು ನಗರದಲ್ಲಿ ವಿರಳ ಸಂಚಾರ ದಿನಕ್ಕೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆದ ಹೀಗಾಗಿ ದೇಶದ ಉಳಿದ ರಾಜ್ಯಗಳಲ್ಲೂ ಈ ಅಭಿಯಾನ ಜಾರಿಗೊಳಿಸುವಂತೆ ಪ್ರಧಾನಂತ್ರಿ ನರೇಂದ್ರ ಮೋದಿ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದೇನೆಂದು ರೇವಣ್ಣ ಅವರು ಹೇಳಿದ್ದಾರೆ.
ಮುಂದಿನ ವಿರಳ ಸಂಚಾರದ ದಿನದಂದು ಸಾರಿಗೆ ಇಲಾಖೆ ಅಧಿಕಾರಿಗಳು ಸರ್ಕಾರಿ ವಾಹನ ಬಳಸದಂತೆ ಸುತ್ತೋಲೆ ಹೊರಡಿಸಲಾಗುವುದು. ಉಳಿದ ಇಲಾಖೆ ಅಧಿಕಾರಿಗಳು ಸಮೂಹ ಸಾರಿಗೆ ಬಳಸುಂತೆ ಕರೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿರಳ ಸಂಚಾರ ದಿನಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಮುಂದಿನ ತಿಂಗಳು ಮತ್ತಷ್ಟು ಪರಿಣಾಮಕಾರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ. ನಗರದಲ್ಲಿ ಅಂದು ಶೇ.26ರಷ್ಟು ಮಾಲಿನ್ಯ ತಗ್ಗಿದೆ. ನಗದಲ್ಲಿ 78 ಲಕ್ಷಕ್ಕೂ ಅಧಿಕ ವಾಹನಗಳಿದ್ದು, ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಸರ್ಕಾರ ಪ್ರತೀ ತಿಂಗಳ ಎರಡನೇ ಭಾನುವಾರದ ದಿನದಂದು ವಿರಳ ಸಂಚಾರ ದಿನ ಅಭಿಯಾನವನ್ನು ಆರಂಭಿಸಿದೆ ಎಂದಿದ್ದಾರೆ.