ಬೆಂಗಳೂರು: ಬಿಪಿಎಲ್ ಕುಟುಂಬಗಳು ಆದಾಯ ಪ್ರಮಾಣಪತ್ರವನ್ನು ನೀಡಿದರೆ ಸ್ಥಳದಲ್ಲಿಯೇ ತಕ್ಷಣಕ್ಕೆ ಬಿಪಿಎಲ್ ಕಾರ್ಡು ನೀಡುವ ಅಭಿಯಾನಕ್ಕೆ ರಾಜ್ಯ ಸರ್ಕಾರ ಇದೇ 20ರಂದು ಚಾಲನೆ ನೀಡಲಿದೆ.
ಸುದ್ದಿಗೋಷ್ಠಿಯಲ್ಲಿ ನಿನ್ನೆ ಈ ವಿಷಯ ತಿಳಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್, ಫೆಬ್ರವರಿ 20ರಂದು ಅಭಿಯಾನವನ್ನು ಆರಂಭಿಸಲಾಗುವುದು.
ರೇಷನ್ ಕಾರ್ಡು ವಿತರಣೆಯ ಮೂರನೇ ಹಂತದಲ್ಲಿ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸ್ಥಳದಲ್ಲಿಯೇ ಕಾರ್ಡು ಪಡೆಯಲು ಅರ್ಹರಾಗಿರುತ್ತಾರೆ. ವರ್ಷಕ್ಕೆ 1.2 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಸ್ಥಳದಲ್ಲಿಯೇ ತಕ್ಷಣ ಬಿಪಿಎಲ್ ಕಾರ್ಡು ನೀಡಲಾಗುತ್ತದೆ. ರೇಷನ್ ಕಾರ್ಡಿನ ಮುದ್ರಣ ಪ್ರತಿಯನ್ನು ಫಲಾನುಭವಿಗಳ ವಿಳಾಸಕ್ಕೆ ಪೋಸ್ಟ್ ಮೂಲಕ ವಾರದೊಳಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಈ ವ್ಯವಸ್ಥೆಯನ್ನು ವಿಕಲಾಂಗರು, ಪಿಂಚಣಿದಾರರು ಮತ್ತು ಇತರರಿಗೂ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದ ಸಚಿವರು ಇದೀಗ ಎಲ್ಲಾ ಬಿಪಿಎಲ್ ಕುಟುಂಬಗಳಿಗೂ ವಿಸ್ತರಿಸಲಾಗಿದೆ ಎಂದರು. ಹೊಸ ಕಾರ್ಡುಗಳಲ್ಲದೆ ಈಗಿರುವ ಬಿಪಿಎಲ್ ಕಾರ್ಡುಗಳನ್ನು ನವೀಕರಿಸಲಿಚ್ಛಿಸುವವರು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಯು.ಟಿ.ಖಾದರ್ ತಿಳಿಸಿದರು.