ಸ್ಪೈಡರ್ ಮ್ಯಾನ್ ಜ್ಯೋತಿ ರಾಜ್ ಜೋಗದಲ್ಲಿ ನಾಪತ್ತೆ
ಸಾಗರ: ಸ್ಪೈಡರ್ ಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿ ರಾಜ್ ಜೋಗ ಜಲಪಾತದಲ್ಲಿ ಕಾಣೆಯಾಗಿದ್ದಾರೆ.
ಜಲಪಾತಕ್ಕೆ ಧುಮಿಕಿ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗುವ ಬೆಂಗಳೂರು ಮೂಲದ ಯುವಕನ ಶವ ಹುಡುಕಾಟಕ್ಕೆ ಜೋಗ ಜಲಪಾತಕ್ಕಿಳಿದಿದ್ದ ಜ್ಯೋತಿ ರಾಜ್ ಕಣ್ಮರೆಯಾಗಿದ್ದಾರೆ. ಮಂಗಳವಾರ ಮುಂಜಾನೆ ಜಲಪಾತಕ್ಕೆ ಇಳಿದಿದ್ದ ಅವರು ಕತ್ತಲಾದರೂ ವಾಪಾಸಾಗಿಲ್ಲ.
ಜೋಗದ ಬಾಂಬೆ ಐಬಿ ಕಡೆಯಿಂದ ಜಲಪಾತಕ್ಕೆ ಇಳಿದಿದ್ದ ಜ್ಯೋತಿ ರಾಜ್ ಮಧ್ಯಾಹ್ನ ಮೂರರ ನಂತರ ನಾಪತ್ತೆಯಾಗಿದ್ದಾರೆ. ಜಾರು ಬಂಡೆಗಳ ಮೇಲಿಂದ ಇಳಿಯುವ ವೇಳೆ ತನ್ನ ಸಹೋದ್ಯೋಗಿಗಳತ್ತ ಕೈಸನ್ನೆ ಮಾಡಿದ್ದ ಅವರು ಮತ್ತೆ ಕಾಣಿಸಿಕೊಂಡಿಲ್ಲ.
ಬೆಂಗಳೂರಿನ ರಾಮಗೊಂಡನಹಳ್ಳಿಯ ಮಂಜುನಾಥ್ ಮೂರು ದಿನಗಳ ಹಿಂದೆ ಜೋಗಕ್ಕೆ ಆಗಮಿಸಿದ್ದು ಡೆತ್ನೋಟ್ ಬರೆದು ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ. ಜಲಪಾತದ ಬಳಿಯಲ್ಲಿ ಯುವಕನ ಬೈಕ್ ಹಾಗೂ ಡೆತ್ ನೋಟ್ ಪತ್ತೆಯಾಗಿತ್ತು.
ಹಿಂದೆ ಹಲವು ಬಾರಿ ಜೋಗದಲ್ಲಿಳಿದು ಮೃತದೇಹಗಳನ್ನು ಹುಡುಕಿ ತೆಗೆದಿದ್ದ ಜ್ಯೋತಿ ರಾಜ್ ಅವರನ್ನು ಮಂಜುನಾಥ್ ದೇಹವನ್ನು ಹುಡುಕಲು ಚಿತ್ರದುರ್ಗದಿಂದ ಕರೆಸಿಕೊಳ್ಳಲಾಗಿತ್ತು.
ಇದೀಗ ಜ್ಯೋತಿ ರಾಜ್ ನಾಪತ್ತೆ ವಿಚಾರ ತಿಳಿದ ಜೋಗ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೋಲೀಸ್, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರಿಂದ ಜ್ಯೋತಿ ರಾಜ್ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos