ಬೆಂಗಳೂರು: ನೈಸ್ ರಸ್ತೆಯಲ್ಲಿ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾಫ್ಟವೇರ್ ಇಂಜಿನಿಯರ್ ಮೃತಪಟ್ಟ ದಾರುಣ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮೃತ ಟೆಕ್ಕಿಗಳನ್ನು ಯಶವಂತಪುರ ನಿವಾಸಿ ಪ್ರಶಾಂತ್(27) ಹಾಗೂ ಕಡಬಗೇರೆಯ ಜನಪ್ರಿಯ ಟೌನ್ ಶಿಪ್ ನಿವಾಸಿ ಅಕ್ಷಯ್ ಕುಮಾರ್(25) ಎಂದು ಗುರುತಿಸಲಾಗಿದೆ.
ಪ್ರಶಾಂತ್ ಹಾಗೂ ಅಕ್ಷಯ್ ಕುಮಾರ್ ಸ್ನೇಹಿತರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಮಾಗಡಿ ರಸ್ತೆಯಿಂದ ನೈಸ್ ರಸ್ತೆ ಪ್ರವೇಶಿಸಿ ಹೊಸೂರು ರಸ್ತೆ ಕಡೆ ಹೋಗುತ್ತಿದ್ದಾಗ ಕೆಂಗೇರಿ ಟೋಲ್ ಗೇಟ್ ಬಳಿ ಅಪಘಾತ ಸಂಭವಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಪ್ರಶಾಂತ್ ಕಾರು ಚಾಲನೆ ಮಾಡುತ್ತಿದ್ದರು. ಎಡಗಡೆಯಿಂದ ಲಾರಿ ಓವರ್ ಟೇಕ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಇಂಡಿಕಾ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಕಾರು ತುಂಬಾ ವೇಗವಾಗಿ ಚಲಿಸುತ್ತಿತ್ತು ಮತ್ತು ಅಪಘಾತ ಸಂಭವಿಸಿದ ಸ್ಥಳದಲ್ಲಿ ಯಾವುದೇ ರಸ್ತೆ ತಿರುವುಗಳಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಂಗೇರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಲಾರಿ ಚಾಲಕನ ವಿರುದ್ಧ ಇದುವರೆಗೂ ಯಾವುದೇ ಕೇಸ್ ದಾಖಲಿಸಿಲ್ಲ.