ಬೆಂಗಳೂರು: ಜಾಗದ ಕೊರತೆ ಇರುವ ಹಿನ್ನೆಲೆಯಲ್ಲಿ ನಗರದ ಎಲ್ಲಾ ವಾರ್ಡ್ ಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜಾಗದ ಕೊರತೆ ಇರುವ ವಾರ್ಡ್ ಗಳಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗುತ್ತಿದೆ ಎಂದು ಶನಿವಾರ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರ.
ಜಾಗದ ಕೊರತೆ ಎದುರಿಸುತ್ತಿರುವ ನಗರ 24 ವಾರ್ಡ್ ಗಳಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗುತ್ತಿದ್ದು, ಅವುಗಳನ್ನು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ನಿಲ್ಲಿಸಲಾಗುವುದು ಎಂದು ಬಿಬಿಎಂಪಿ ವಕ್ತಾರ ಎಲ್ ಸುರೇಶ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಜನವರಿ 26ರಂದು 24 ಇಂದಿರಾ ಮೊಬೈಲ್ ಕ್ಯಾಂಟೀನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುತ್ತಿದ್ದು, ಪ್ರತಿ ವಾಹನ ಖರೀದಿಗೆ 8.50 ಲಕ್ಷ ರೂ. ಮತ್ತು ಊಟ, ತಿಂಡಿ ವಿತರಣೆಗೆ ಅಗತ್ಯವಿರುವ ವ್ಯವಸ್ಥೆ, ವಿನ್ಯಾಸ, ಉಪಕರಣಗಳ ಅಳವಡಿಕೆಗೆ 4.85 ಲಕ್ಷ ರು. ವೆಚ್ಚ ಮಾಡಲಾಗಿದೆ.
ಟೆಂಪೋ ಟ್ರಾವೆಲ್ಲರ್ ಅನ್ನು ಇಂದಿರಾ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಲಾಗಿದ್ದು, ವಾಹನದಲ್ಲಿ ಸಿಸಿಟಿವಿ ಹಾಗೂ ಜಿಪಿಎಸ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ವಾಹನದ ಮೇಲ್ಭಾಗದಲ್ಲಿ 400-500 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ಗಳನ್ನು ಹೊಂದಿರಲಿವೆ. ಶುದ್ಧ ಕುಡಿಯುವ ನೀರಿನ ಘಟಕವೂ ಇರಲಿದೆ. ಸಾರ್ವಜನಿಕರು ಊಟ, ತಿಂಡಿ ಸೇವಿಸಿದ ಬಳಿಕ ತಟ್ಟೆಗಳನ್ನು ಡ್ರಮ್ಗೆ ಹಾಕುವ ವ್ಯವಸ್ಥೆ ಇದೆ. ತಿಂಡಿ, ಊಟದ ಸಮಯ ಮುಗಿದ ಬಳಿಕ ವಾಹನವು ಅಡುಗೆ ಮನೆ ಬಳಿ ತೆರಲಿದೆ. ಅಲ್ಲಿಯೇ ತಟ್ಟೆಗಳನ್ನು ಶುಚಿಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos