ಬೆಂಗಳೂರು: ಆಫ್ರಿಕಾದ ಯುವಕನೊಬ್ಬ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಮನೆಯ ಗೋಡೆಗೆ ಅಪ್ಪಳಿಸಿ ಕಾರು ಚಾಲಕ ಮೃತಪಟ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಇಂದು ಬೆಳಗ್ಗೆ ಬಾಣಸವಾಡಿ ಹತ್ತಿರ ಹೆಣ್ಣೂರು ಮುಖ್ಯ ರಸ್ತೆಯ ಗೆದ್ದಲಹಳ್ಳಿಯಲ್ಲಿ ನಡೆದಿದೆ.
ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ ಆತನ ಮತ್ತಿಬ್ಬರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭೀತಿಗೊಂಡ ಸ್ಥಳೀಯರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಸುತ್ತಮುತ್ತಲ ಪ್ರದೇಶದಲ್ಲಿ ಆಫ್ರಿಕಾದವರು ಅಡ್ಡಾದಿಡ್ಡಿ ಕಾರು ಚಲಾಯಿಸಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯನ್ನುಂಟುಮಾಡುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಘಟನೆಯಲ್ಲಿ ಮೃತ ಆಫ್ರಿಕಾ ಪ್ರಜೆಯನ್ನು ಅಸಮಿ ಬಾಲಿ ವೆಬ್ (24 ವ) ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ಆತನ ಸ್ನೇಹಿತರಾದ ಪೀಟ್ರ್ಪಿ, (27) ಮತ್ತು ಬ್ರೂನೋ (32) ಆಗಿದ್ದಾರೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರೆಲ್ಲರೂ ಕಾಂಗೊ ದೇಶದವರಾಗಿದ್ದು ಹೆಣ್ಣೂರಿನಲ್ಲಿ ವಾಸಿಸುತ್ತಿದ್ದರು.
ಇಂದು ನಸುಕಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೂವರೂ ಮದ್ಯ ಸೇವಿಸಿ ಮುಂಜಾನೆ ಜಾವ ಮನೆಗೆ ವಾಪಸಾಗುತ್ತಿದ್ದರು. ಮದ್ಯದ ಅಮಲಿನಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಅಂಗಡಿ ಮತ್ತು ಮನೆಯ ಕಟ್ಟಡಕ್ಕೆ ಹೋಗಿ ಕಾರು ಗುದ್ದಿದೆ.
ಗಂಭೀರ ಗಾಯಗೊಂಡ ಮೂವರನ್ನು ಹಾದಿಯಲ್ಲಿ ಹೋಗುತ್ತಿದ್ದವರು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಿ ಅಲ್ಲಿ ಮೃತಪಟ್ಟಿದ್ದಾನೆ. ಮತ್ತಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ನುಜ್ಜುಗುಜ್ಜಾಗಿರುವ ಕಾರನ್ನು ವಶಪಡಿಸಿಕೊಂಡಿದ್ದಾರೆ.ಗಾಯಗೊಂಡವರು ಮತ್ತು ಸ್ಥಳೀಯರಿಂದ ಪೊಲೀಸರು ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಅಜಾಗರೂಕತೆಯ ಚಾಲನೆ ಕೇಸನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos