ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲಾಬಾಗ್ ನಲ್ಲಿ ಆಯೋಜಿಸಿದ್ದ ಫಲಪುಷ್ಪಪ್ರದರ್ಶನಕ್ಕೆ ಈ ಬಾರಿ ಹೆಚ್ಚಿನ ಪ್ರಮಾಣದ ಸಾರ್ವಜನಿಕರು ಭೇಟಿ ನೀಡಿದ್ದು, ದಾಖಲೆ ಪ್ರಮಾಣದ ಗಳಿಕೆಯಾಗಿದೆ. ಜ. 19ರಂದು ಆರಂಭವಾಗಿರುವ ಪ್ರದರ್ಶನ ನಾಳೆ ಅಂತ್ಯಗೊಳ್ಳಲಿದೆ.
ಶ್ರವಣಬೆಳಗೊಳದ ಮಹಾಮಸ್ತಾಕಾಭಿಷೇಕ ಈ ಬಾರಿ ಆಕರ್ಷಣೀಯ ಕೇಂದ್ರಬಿಂದುವಾಗಿತ್ತು, ಇದನ್ನು ವೀಕ್ಷಿಸಲು ಕಳೆದ ಎಂಟು ದಿನಗಳ ಅವಧಿಯಲ್ಲಿ 3 .39 ಲಕ್ಷ ವೀಕ್ಷಕರು ಭೇಟಿ ನೀಡಿದ್ದಾರೆ. 120.63 ಲಕ್ಷ ಆದಾಯ ಗಳಿಕೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಗಣರಾಜ್ಯೋತ್ಸವ ದಿನವಾದ ನಿನ್ನೆ ಒಂದೇ ದಿನ 1 ಕೋಟಿ 31 ಲಕ್ಷ ವೀಕ್ಷಕರು ಆಗಮಿಸಿದ್ದು, 55 ಲಕ್ಷ ದ 55 ಸಾವಿರ ರೂ. ಆದಾಯ ಬಂದಿದೆ ಎಂದು ಲಾಲ್ ಬಾಗ್ ನ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
ಗೊಮ್ಮಟೇಶ್ವರ ಮೂರ್ತಿ ವೀಕ್ಷಿಸಲು ಸಹಸ್ರಾರು ಸಂಖ್ಯೆಯ ಜನರು ಆಗಮಿಸಿದ್ದು, ಆಲಂಕೃತ ಪುಷ್ಪಗಳನೆಲ್ಲಾ ಬೇರೆ ಕಡೆಯಿಂದ ಆಮದು ಮಾಡಿಕೊಳ್ಳಲಾಗಿತ್ತು ಎಂದು ಸಿಬ್ಬಂದಿ ವೆಂಕಟಾಚಲಮ್ ತಿಳಿಸಿದ್ದಾರೆ.
ಗಾಜಿನ ಮನೆಯಲ್ಲಿ ಮಹಾವೀರ ಮತ್ತು ಶ್ರವಣಬೆಳಗೊಳವನ್ನು ಸೃಷ್ಟಿಸಲಾಗಿತ್ತು., ಇದರ ಸುತ್ತಲೂ ತರಹೇವಾರಿ ಹೂಗಳ ಮಾರಾಟ, ನರ್ಸರಿ ಮಳಿಗೆಗಳನ್ನು ತೆರೆಯಲಾಗಿತ್ತು,
ಜನರ ದಟ್ಟಣೆಯಿಂದಾಗಿ ಊಟಕ್ಕೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ದಿನಗಟ್ಟಲೇ ಲಾಲ್ ಬಾಗ್ ನಲ್ಲೇ ಕಾಲ ಕಳೆಯಬೇಕೆಂದು ಬಂದವರು ಚೂರಿಮುರಿಯನ್ನೇ ಊಟವನ್ನಾಗಿ ತಿನ್ನಬೇಕಾಯಿತು ಎಂದು ಪೀಣ್ಯದಿಂದ ಬಂದಿದ್ದ ಕುಟುಂಬವೊಂದು ಅಪಾದಿಸಿತು.
ಶೌಚಾಲಯದ ವ್ಯವಸ್ಥೆಯೂ ಸರಿ ಇರಲಿಲ್ಲ. ಇರುವಂತಹ ಶೌಚಾಲಯಗಳು ಬಳಸಲು ಯೋಗ್ಯವಾಗಿಲ್ಲ ಎಂದು ಯುವತಿಯರ ತಂಡ ಆರೋಪಿಸಿತು.
ಅಲ್ಲದೇ, ಸಸ್ಯೋದ್ಯಾನಕ್ಕೆ ಬಂದಂತಹ ವೀಕ್ಷಕರು ಪಾರ್ಕಿಂಗ್ ಸಮಸ್ಯೆ ಎದುರಿಸುವಂತಾಯಿತು.ಲಾಲ್ ಬಾಗ್ ನಲ್ಲಿ ಸಸ್ಯಗಳಿಗಿಂತಲೂ ಜನರು ಹಾಗೂ ಮಳಿಗೆಗಳೇ ಹೆಚ್ಚಾಗಿದೆ .ಎಲ್ಲೆಲ್ಲೂ ಕಸವೇ ತುಂಬಿದ್ದು, ಹಸಿರು ಮಾಯವಾದಂತೆ ಕಾಣುತ್ತಿದೆ ಎಂದು ವೃದ್ದರೊಬ್ಬರು ವಿಷಾದ ವ್ಯಕ್ತಪಡಿಸಿದರು.