ಚಿಕ್ಕಮಗಳೂರು: ಆನೆ ದಂತ, ಜಿಂಕೆ ಕೊಂಬು ಸೇರಿ ವನ್ಯಜೀವಿ ಉತ್ಪನ್ನಗಳ ಮಾರಾಟಜಾಲವನ್ನು ಬೇಧಿಸಿರುವ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ಆರು ಜನರನ್ನು ಬಂಧಿಸಿದ್ದಾರೆ.
ಶಿವಮೊಗ್ಗದ ಸತೀಶ್, ಗಾಜನೂರಿನ, ತರೀಕೆರೆ ತಾಲೂಕಿನ ಉಪ್ಪಾರ ಬಸವಣ ಹಳ್ಳಿಯ ಸಹೋದರರಾದ ರವಿ ಹಾಗೂ ಲಕ್ಷ್ಮಣ ಬಂಧಿತರಾಗಿದ್ದು ಬಂಧಿತರಿಂದ 4 ಕೆ.ಜಿ. ಆನೆದಂತ, 11 ಕೆ.ಜಿ. ಚಿಪ್ಪುಹಂದಿಯ ಚಿಪ್ಪು ಹಾಗು 16.5 ಕೆ.ಜಿ. ಜಿಂಕೆ ಕೊಂಬು, 4.5 ಕೆ.ಜಿ. ಕಾಡುಕೋಣದ ಕೊಂಬು, 3 ಮೊಬೈಲ್ ಮತ್ತು 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ವನ್ಯಜೀವಿಗಳ ಬೇಟೆ ಹಾಗೂ ಪ್ರಾಣಿಗಳ ದೇಹದ ಅಮೂಲ್ಯ ಭಾಗಗಳ ಅಕ್ರಮ ಮಾರಾಟ ಜಾಲದ ಕುರಿತಂತೆ ಬಹಳ ಹಿಂದೆಯೇ ಮಾಹಿತಿ ಲಭಿಸಿದ್ದು ಅವರನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಅಭಯಾರಣ್ಯದ ನ್ಯಾಚ್ಯುರಲಿಸ್ಟ್ ಓರ್ವರು ತಂತ್ರ ಹೂಡಿದ್ದು ಅದರಂತೆ ಅರಣ್ಯ ಇಲಾಖೆ ಪೋಲೀಸ್ ಸಿಬ್ಬಂದಿಗಳು ಗ್ರಾಹಕರ ವೇಷ ಧರಿಸಿ ಅಕ್ರಮ ಮಾರಾಟ ಜಾಲವನ್ನು ತಮ್ಮ ಬಲೆಗೆ ಕೆಡಹಿಕೊಂಡಿದೆ.
ಆರೋಪಿಗಳು ಕಾಡುಪ್ರಾಣಿಗಳ ದೇಹದ ವಿವಿಧ ಭಾಗಗಳನ್ನು ವಿದೇಶಗಳಿಗೆ ಮಾರಾಟ ಮಾಡುತ್ತಿದ್ದರು. ಅವರು ಭದ್ರಾ ಅಭಯಾರಣ್ಯ ಸೇರಿ ಮಲೆನಾಡಿನ ದಟ್ಟ ಕಾನನದಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಎಂದು ತರೀಕೆರೆ ಲಕ್ಕವಳ್ಳಿ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು ಅವರ ಬಳಿ ಇದ್ದಿರಬಹುದಾದ ಇನ್ನೂ ಅನೇಕ ಪ್ರಾಣಿಗಳ ಚರ್ಮ, ಕೊಂಬು, ಮತ್ತಿತರೆ ವಸ್ತುಗಳ ಪತ್ತೆ ಕುರಿತಂತೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.