ರಾಜ್ಯ

ಪತ್ನಿ ಕೊಂದ ಪತಿಗೆ 11 ದಿನಗಳಲ್ಲಿಯೇ ಜೀವಾವಧಿ ಶಿಕ್ಷೆ; ಇತಿಹಾಸ ಸೃಷ್ಟಿಸಿದ ಚಿತ್ರದುರ್ಗ ನ್ಯಾಯಾಲಯ

Manjula VN
ಚಿತ್ರದುರ್ಗ; ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಿರುವ ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಘಟನೆ ನಡೆದ ಕೇವಲ 11 ದಿನಗಳಲ್ಲಿಯೇ ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ಈ ಮೂಲಕ ಇತಿಹಾಸ ಸೃಷ್ಟಿಸಿದೆ. 
ಚಳ್ಳಕೆರೆ ತಾಲೂಕಿನ ವಲಸೆ ಗ್ರಾಮದ ಪರಮೇಶ್ವರ್ ಸ್ವಾಮಿ (75) ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಶೀಲ ಶಂಕಿತಿ ಪತ್ನಿ ಪುಟ್ಟಮ್ಮ (63) ಎಂಬುವವರನ್ನು ಪರಮೇಶ್ವರ್ ಜೂ.27 ರಂದು ಹತ್ಯೆ ಮಾಡಿದ್ದ. ಹತ್ಯೆ ಮಾಡಿದ ಬಳಿಕ ಗ್ರಾಮದ ಹೊರವಲಯದಲ್ಲಿ ತಲೆ ಮರೆಸಿಕೊಂಡಿದ್ದ. 
ಹತ್ಯೆಯಾದ ದಿನದಂದೇ ಪುಟ್ಟಮ್ಮ ಸಂಬಂಧಿಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ತಂಡವನ್ನು ರಚನೆ ಮಾಡಿ ತೀವ್ರ ಹುಡುಕಾಟ ಆರಂಭಿಸಿದ್ದರು. 48 ಗಂಟೆಗಳಲ್ಲಿ ಆರೋಪಿಯನ್ನು ಬಂಧನಕ್ಕೊಳಪಡಿಸಿದರು. ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. 
ಹತ್ಯೆ ಕುರಿತಂತೆ ಪ್ರತ್ಯಕ್ಷದರ್ಶಿಗಳಾಗಿದ್ದ ಪುಟ್ಟಮ್ಮ ಅವರ ಮಗ ಸೇರಿ ಮೂವರು ಸ್ಥಳೀಯರು ಸಾಕ್ಷ್ಯ ನುಡಿದಿದ್ದರು. ಇದರಂತೆ ಜು.3 ಮತ್ತು 4, 5 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಜು.7 ರಂದು ಶಿಕ್ಷೆಯನ್ನು ಪ್ರಕಟಿಸಿತ್ತು. 
ಇದೊಂದು ಅತ್ಯಂತ ವಿರಳ ತೀರ್ಪು ಎಂದೇ ಹೇಳಬಹುದು. ಕರ್ನಾಟಕದಲ್ಲಿ ಇಷ್ಟು ವೇಗವಾಗಿ ಬಂದಿರುವ ತೀರ್ಪನ್ನು ನಾನೆಂದೂ ನೋಡಿಯೇ ಇಲ್ಲ. ಪೊಲೀಸರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು, ತ್ವರಿತಗತಿಯಲ್ಲಿ ಆರೋಪಿಯನ್ನು ಬಂಧನಕ್ಕೊಳಪಡಿಸಿ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಇದರಿಂದ ನ್ಯಾಯಾಲಯ ತ್ವರಿತಗತಿಯಲ್ಲಿ ಆದೇಶ ನೀಡಿದೆ ಎಂದು ಚಿತ್ರದುರ್ಗ ಎಸ್'ಪಿ ಶ್ರೀನಾಥ್ ಎಂ ಜೋಶಿಯವರು ಹೇಳಿದ್ದಾರೆ. 
SCROLL FOR NEXT