ಬೆಂಗಳೂರು: ದಿನ ಬೆಳಗಾದರೇ ಅಪರಾಧ ಪ್ರಮಾಣ ಕಡಿಮೆ ಮಾಡಲು ಹರಸಾಹಸ ಪಡುವ ಪೊಲೀಸರು ತಮ್ಮ ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಿಕೊಳ್ಳ ಬೇಕೆಂದು ಇಲಾಖೆ, ಸಿಬ್ಬಂದಿಗೆ ಆದೇಶ ಹೊರಡಿಸಿದೆ. ಒಂದು ವೇಳೆ ತಮ್ಮ ತೂಕ ಕಡಿಮೆ ಮಾಡಿಕೊಳ್ಳದಿದ್ದರೇ ಅವರಿಗೆ ಕಡಿಮೆ ಊಟ ಹಾಗೂ ಯೋಗಕ್ಕಾಗಿ ಯೋಗ ಮ್ಯಾಟ್ ನೀಡಲಾಗುತ್ತದೆ.
ಪ್ರತಿ ವರ್ಷ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಯ 150 ಪೊಲೀಸರು ಕರ್ತವ್ಯದಲ್ಲಿರುವಾಗಲೇ ಸಾವನ್ನಪ್ಪುತ್ತಾರೆ, ಅವರ ಜೀವನ ಶೈಲಿ ಇದಕ್ಕೆ ಕಾರಣ. ಸಶಸ್ತ್ರ ಪಡೆ ಆರೋಗ್ಯಯುತವಾಗಿ ಹಾಗೂ ಸಮರ್ಥವಾಗಿರುವಂತೆ ಕೆಎಸ್ ಆರ್ ಪಿಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ಕರೆ ನೀಡಿದ್ದು ಫಿಟ್ ಆಗಿರುವಂತೆ ಸುತ್ತೊಲೆ ಹೊರಡಿಸಿದ್ದಾರೆ ಒಂದು ವೇಳೆ ಆದೇಶ ಪಾಲಿಸದಿದ್ದರೇ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 14 ಸಾವಿರ ಕೆಎಸ್ ಆರ್ ಪಿ ಹುದ್ದೆಗಳಿದ್ದು, ರಾಜ್ಯದ್ಯಾಂತ ಸುಮಾರು 10 ಸಾವಿರ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ, ನೇಮಕಾತಿ ಸಂದರ್ಭದಲ್ಲಿ ಆಕಾಂಕ್ಷಿಗಳು ಫಿಟ್ ಆಗಿರಲು ವಿವಿಧ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಆದರೆ ನಂತರ ಅವರಲ್ಲಿ ಕೆಲವರು ದೇಹಕ ತೂಕ ಹೆಚ್ಚಿಸಿಕೊಂಡು ದಪ್ಪವಾಗಿ ಹೊಟ್ಟೆ ಮುಂಬರಿಸಿಕೊಳ್ಳುತ್ತಾರೆ. ಹಲವು ಸಾರ್ವಜನಿಕ ವೇದಿಕೆಗಳಲ್ಲಿ ಪೊಲೀಸರು ಅಪಹಾಸ್ಯಕ್ಕೀಡಾಗಿದ್ದಾರೆ. ಹೀಗಾಗಿ ನಮ್ಮ ವರ್ಚಸ್ಸು ಬದಲಿಸಿಕೊಳ್ಳಬೇಕಾಗಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
ಸೇವೆಯಲ್ಲಿರುವಾಗಲೇ ಹಲವು ಸಿಬ್ಬಂದಿ ವಿವಧ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಅದಕ್ಕೆ ಅನಾರೋಗ್ಯಕರ ಆಹಾರ ಪದ್ಧತಿ ಹಾಗೂ ಕಳಪೆ ಜೀವನ ಶೈಲಿ ಪ್ರಮುಖ ಕಾರಣ,ಅವರಲ್ಲಿ ಕೆಲವರು ಮದ್ಯವ್ಯಸನಿಗಳು, ಧೂಮಪಾನ ಮತ್ತು ಗುಟ್ಕಾ ಸೇವಿಸುತ್ತಾರೆ. ಜೊತೆಗೆ ಕೆಲವರು ಬಹುತೇಲ ಸಮಯವನ್ನು ಮೊಬೈಲ್ ಫೋನ್ ನಲ್ಲಿ ಕಳೆಯುತ್ತಾರೆ. ಯಾವುದೇ ದೈಹಿಕ ಚಟುವಟಿಕೆಗಳಿಲ್ಲದೇ ಹಲವು ರೋಗಗಳಿಗೆ ತುತ್ತಾಗುತ್ತಾರೆ ಎಂದು ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಇಲಾಖೆಯ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿರುವ ಭಾಸ್ಕರ್ ರಾವ್, ತಮ್ಮ ಅಧೀನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಎತ್ತರ ಮತ್ತು ತೂಕ ದಾಖಲಿಸಬೇಕು, ಯಾರು ಅಧಿಕ ತೂಕ ಇದ್ದಾರೋ ಅವರನ್ನು ಪ್ರತ್ಯೇಕ ಪಟ್ಟಿ ಮಾಡಿ, ಅವರಿಗೆ ದೈಹಿಕ ಚಟುವಟಿಕೆ ಯಲ್ಲಿ ತೊಡಗಿಸಿ ತೂಕ ಇಳಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ, ಜೊತೆಗೆ ಪ್ರತಿ ತಿಂಗಳು ಅವರ ತೂಕವನ್ನು ಪರಿಶೀಲಿಸುತ್ತಿರಬೇಕು, ಯಾರು ತೂಕ ಇಳಿಸಿಕೊಳ್ಳುವುದಿಲ್ಲವೋ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ,
ಅಧಿಕ ತೂಕ ಇರುವವರು ಯೋಗ ಮತ್ತು ಇಂಡೋರ್ ಕ್ರೀಡೆಗಳಲ್ಲಿ ಭಾಗವಹಿಸಬಹುದು, ಇದಕ್ಕಾಗಿ ನಾವು ವೈದ್ಯಕೀಯ ಸಲಹೆ ಕೊಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಆರೋಗ್ಯಕರ ಆಹಾರ ನೀಡಬೇಕು,. ಸಿರಿಧಾನ್ಯಗಳಿಂದ ಮಾಡಿದ ಆಹಾರ ನೀಡುವಂತೆ ಕೃಷಿ ವಿಜ್ಞಾನ ವಿವಿ ಜೊತೆ ಚರ್ಚಿಸಿದ್ದೇವೆ, ಕಡಿಮೆ ಎಣ್ಣೆ ಬಳಸಿ ಆಹಾರ ತಯಾರಿಸಬೇಕು. ಆಹಾರದಲ್ಲಿ ಮೊಟ್ಟೆ, ಹಣ್ಣು, ಹಸಿರು ತರಕಾರಿ ತಿಂದು ಪಥ್ಯದಲ್ಲಿರಬೇಕು.ನಮ್ಮ ಹಲವು ಪೊಲೀಸ್ ಸಿಬ್ಬಂದಿ ಮೂರು ಹೊತ್ತು ಅನ್ನ ತಿನ್ನುತ್ತಾರೆ,. ಹೀಗಾಗಿ ಅವರಿಗೆ ಬೊಜ್ಜಿನ ಸಮಸ್ಯೆ ಬರುತ್ತದೆ, ಅವರ ಆಹಾರದಲ್ಲಿ ಹೆಚ್ಚಿನ ಪ್ರೊಟೀನ್ ಇರುವುದಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos