ಬೆಂಗಳೂರು: ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಆತನ ಪತ್ನಿ ಫ್ಲ್ಯಾಟ್ ಒಂದರ ಬಾತ್ ರೂಂ ನಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಮಹೇಶ್(35) ಮತ್ತು ಶೀಲಾ (30) ಮೃತ ದಂಪತಿಯಾಗಿದ್ದು ಸ್ನಾನ ಮಾಡುತಿದ್ದಾಗ ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ಬಳಿಕವೇ ಸತ್ಯ ಹೊರಬೀಳಲಿದೆ ಎಂದು ಪೋಲೀಸರು ಹೇಳಿದ್ದಾರೆ.
ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಶಿವಗಂಗಾ ಅಪಾರ್ಟ್ಮೆಂಟ್ನಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.ಮಧ್ಯಾಹ್ನ ಸುಮಾರು 2.30ಕ್ಕೆ ದಂಪತಿಯ ಪುತ್ರಿ ಶಾಲೆಯಿಂದ ಮನೆಗೆ ಹಿಂತಿರುಗಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಕಿರಿಯ ಮಗು ನೆಲಮಹಡಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಇದ್ದರೆ ಹಿರಿಯ ಮಗು ಶಾಲೆಗೆ ಹೋಗಿದ್ದದ್ದು ಮನೆಗೆ ಮರಳಿದೆ. ಆಗ ಸಂಬಂಧಿಕರು ಮಹೇಶ್ ಹಾಗು ಆತನ ಪತ್ನಿಯನ್ನು ಕರೆದಿದ್ದಾರೆ.ಆದರೆ ದಂಪತಿಗಳಿಂದ ಯಾವ ಪ್ರತಿಕ್ರಿಯೆ ಬರದ ಕಾರಣ ಮೆಟ್ಟಿಲೇರಿ ಬಂದ ಅವರು ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡಿದ್ದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೂ ಸಹ ಯಾರೂ ಬಾಗಿಲು ತೆರೆಯದೆ ಹೋದ ಹಿನ್ನೆಲೆಯಲ್ಲಿ ಪೋಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಪೋಲೀಸರು ಬಾಗಿಲನ್ನು ಒಡೆದು ಒಳ ಪ್ರವೇಶಿಸಿದಾಗ ದಂಪತಿಗಳು ಸ್ನಾನದ ಕೋಣೆಯಲ್ಲಿ ಶವವಾಗಿರುವುದು ಪತ್ತೆಯಾಗಿದೆ.
ಮೂಲತಃ ಬೆಳಗಾವಿಯ ಅಥಣಿ ತಾಲೂಕಿನ ನಿವಾಸಿಯಾದ ಮಹೇಶ್ ಏಳು ವರ್ಷಗಳ ಹಿಂದೆ ಶೀಲಾಳನ್ನು ವಿವಾಹವಾಗಿದ್ದ.ಮಹೇಶ್ ವೈಟ್ಫೀಲ್ಟ್ ಹತ್ತಿರ ಸಾಫ್ಟ್ವೇರ್ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರೆಂದು ಹೇಳಲಾಗಿದೆ.
ಇದೀಗ ದಂಪತಿಗಳಿಬ್ಬರೂ ಮೃತಪಟ್ಟ ಕಾರಣ 6 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ.