ಬೆಂಗಳೂರು: ರಾಕಿಂಗ್ ಸ್ಟಾರ್ ನಟ ಯಶ್ ಕೊಲೆಗೆ ರೌಡಿಗಳು ಸಂಚು ರೂಪಿಸಿದ್ದರು ಎಂಬ ವಿಚಾರದ ಇದೀಗ ಬಹಿರಂಗಗೊಂಡಿದೆ.
2 ವರ್ಷಗಳ ಹಿಂದೆಯೇ ನಟ ಯಶ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಂಬ ಸುದ್ದಿಗಳು ಹರಿದಾಡಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಯಶ್ ಮತ್ತು ನಿರ್ಮಾಪಕ ಜಯಣ್ಣ ಅವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದರು.
ಇದಾದ ಬಳಿಕ ಎಚ್ಚೆತ್ತ ಪೊಲೀಸರು ಹಲವು ರೌಡಿ ಶೀಟರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಈ ವೇಳೆ ಪೊಲೀಸರ ಕೈಗೆ ಸೈಕಲ್ ರವಿ ಸಿಕ್ಕಿರಲಿಲ್ಲ. ಇದರೊಂದಿಗೆ ಮತ್ತೊಬ್ಬ ರೌಡಿಶೀಟರ್ ತ್ಯಾಗರಾಜನಗರದ ಕೋದಂಡರಾಮ ಕೂಡ ಸಿಕ್ಕಿರಲಿಲ್ಲ. ಈಗಲೂ ಕೋದಂಡರಾಮ ಎಲ್ಲಿದ್ದಾನೆಂಬುದು ಯಾರಿಗೂ ತಿಳಿದಿಲ್ಲ.
ಜೂನ್.27 ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಸೈಕಲ್ ರವಿ ಬಂಧಿತನಾಗಿದ್ದ. ಇದೀಗ ಸೈಕಲ್ ರವಿಯನ್ನು ಬಂಧನಕ್ಕೊಳಪಡಿಸಿದ ಅಧಿಕಾರಿಗಳು ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ವಿಚಾರಣೆ ವೇಳೆ ರವಿ ಯಶ್ ಕೊಲೆ ಕುರಿತಂತೆಯೂ ಚರ್ಚೆ ನಡೆದಿತ್ತು ಎಂದು ಹೇಳಿಕೊಂಡಿದ್ದಾನೆ.
ಬೆಂಗಳೂರು ಹೊರವಲಯದಲ್ಲಿ ನಡೆದಿದ್ದ ಪಾರ್ಟಿಯೊಂದರಲ್ಲಿ ನಟ ಯಶ್ ಕುರಿತಂತೆ ಮಾತನಾಡಲಾಗುತ್ತಿತ್ತು. ಈ ವೇಳೆ ಹತ್ಯೆ ಕುರಿತಂತೆಯೂ ಚರ್ಚೆಗಳು ನಡೆದಿತ್ತು ಎಂದು ಹೇಳಿಕೊಂಡಿದ್ದಾನೆ.
ಆದರೆ, ಯಶ್ ವಿಚಾರದಲ್ಲಿ ಸೈಕಲ್ ರವಿಗಿಂತಲೂ ರೌಡಿ ಶೀಟರ್ ಕೋದಂಡರಾಮ ಹೆಚ್ಚು ಆಸಕ್ತಿ ವಹಿಸಿದ್ದ. ಪರಸ್ಪರ ವಿರೋಧಿಗಳಾಗಿದ್ದ ಸೈಕರ್ ರವಿ ಮತ್ತು ಕೋದಂಡರಾಮ ಯಶ್ ವಿಚಾರ ಬಂದ ಕೂಡಲೇ ವೈರತ್ವ ಮರೆತು ಒಂದಾಗಿದ್ದರು ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos