ಬಳ್ಳಾರಿ: ಟ್ರ್ಯಾಕ್ಟರ್ ಗೆ ಮರಳು ತುಂಬಲಿಕ್ಕಾಗಿ ತೆರಳಿದ್ದ ತಂದೆ ಮತ್ತು ಮಗ ತುಂಗಭದ್ರೆಯ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಬಾಗೇವಾಡಿಯಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದ್ದೆ. ಗ್ರಾಮದ ನಿವಾಸಿಗಳಾದ ರಫೀಕ್ (36) ಹಾಗೂ ಅವರ ಪುತ್ರ ಇಶಾಕ್ (6) ಸೇರಿ ಗ್ರಾಮದ ಇತರರು ಶುಕ್ರವಾರ ರಾತ್ರಿ ನದಿಯಲ್ಲಿ ಮರಳು ತೆಗೆಯಲು ಹೋಗಿದ್ದಾರೆ. ಈ ವೇಳೆ ಜಲಾಶಯದಿಂದ ಒಮ್ಮೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು ನದಿಯಲ್ಲಿ ದೊಡ್ಡ ಪ್ರವಾಹ ಉಂಟಾಗಿದೆ.
ಪ್ರವಾಹದೋಪಾದಿಯಲ್ಲಿ ನೀರು ನುಗ್ಗುವುದನ್ನು ನೋಡಿದ ಉಳಿದ ಗ್ರಾಮಸ್ಥರು ತಪ್ಪಿಸಿಕೊಂಡಿದ್ದಾರೆ. ಆದರೆ ತಂದೆ ಮಗ ಮಾತ್ರ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾರೆ.
ವಿಷಯ ತಿಳಿದ ಸಿರಗುಪ್ಪ ಠಾಣೆ ಪೋಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯ ಈಜುಗಾರರ ನೆರವಿನೊಂದಿಗೆ ಶವಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ ಶನಿವಾರ ಮದ್ಯಾಹ್ನದವರೆಗೆ ಇಬ್ಬರ ಶವವೂ ಪತ್ತೆಯಾಗಿಲ್ಲ.
ಘಟನೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ಇನ್ನೋರ್ವ ವ್ಯಕ್ತಿ ಸದ್ದಾಂ ಈಜಿ ದಡ ಸೇರಿದ್ದಾನೆ. ಮಳೆಯಿಂದಾಗಿ ನದಿ ಈರಿನ ಮಟ್ಟ ಏರಿಕೆಯಾಗಿದ್ದು ಶುಕ್ರವಾರ . 50 ಸಾವಿರದಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಸಾರ್ವಜನಿಕರಿಗೆ ನದಿ ಸಮೀಪಕ್ಕೆ ತೆರಳದಂತೆ ಎಚ್ಚರಿಕೆ ನಿಡಲಾಗಿತ್ತು.