ಬೆಂಗಳೂರು: ಹೊಸದಾಗಿ ರಚನೆಯಾಗಿರುವ 44 ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ಕೂಡಲೇ ಸೂಕ್ತ ಸ್ಥಳ ಗುರುತಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ ರಚನೆಗೊಂಡ 50 ತಾಲೂಕುಗಳ ಪೈಕಿ 44 ಕಡೆಗಳಲ್ಲಿ ಮಿನಿ ವಿಧಾನಸೌಧವಿಲ್ಲ. ಜತೆಗೆ ಹೊಸ ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ 14 ಸೇವೆಗಳನ್ನು ಒದಗಿಸುವುದಕ್ಕೆ ಕಚೇರಿ ಇಲ್ಲ. ಇದಕ್ಕಾಗಿ ಕ್ಷಿಪ್ರಗತಿಯಲ್ಲಿ ಕೆಲಸ ಮಾಡಬೇಕಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾಪ ಸಲ್ಲಿಸಲು ಸೂಚಿಸಿದ್ದಾರೆ.
ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಕೃಷಿ ಮಾಡಿಕೊಂಡು ಫಾರಂ ನಂಬರ್ 50 ಹಾಗೂ 53ರಲ್ಲಿ ಹಾಕಿಕೊಂಡ ಅರ್ಜಿಯನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು,'' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
''ಅರ್ಜಿ ಆಧರಿಸಿ ಮೂರು ತಿಂಗಳೊಳಗಾಗಿ ಹಕ್ಕುಪತ್ರ ನೀಡಬೇಕು. ಆದರೆ ಸಿಆರ್ಝೆಡ್, ಕುಮ್ಕಿ, ಗೋಮಾಳ, ಸಿಆಂಡ್ಡಿ, ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಮನೆಕಟ್ಟಿಕೊಂಡವರು ಹಕ್ಕುಪತ್ರ ಕೇಳಿದರೆ ಅದಕ್ಕೆ ಅವಕಾಶವಿಲ್ಲ. ಈಗಾಗಲೇ 9 ಸಾವಿರ ಹಳ್ಳಿಗಳನ್ನು ಪೋಡಿಮುಕ್ತ ಎಂದು ಘೋಷಿಸಿದ್ದು, ಇನ್ನೂ 21 ಸಾವಿರ ಗ್ರಾಮಗಳನ್ನು ಪೋಡಿ ಮುಕ್ತ ಎಂದು ಘೋಷಿಸಬೇಕಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕೆಲಸ ಮಾಡಿ,''ಎಂದು ಸೂಚನೆ ನೀಡಿದರು.
ಮಿನಿ ವಿಧಾನಸೌಧ ಮಾಡದೇ ಇದ್ದರೆ ಹೊಸ ತಾಲೂಕು ರಚನೆ ಉದ್ದೇಶವೇ ವಿಫಲವಾಗುತ್ತದೆ. ಕೇವಲ 6 ಕಡೆ ಮಾತ್ರ ಸ್ಥಳ ಗುರುತಿಸಿರುವುದು ನಿರಾಶಾದಾಯಕ ಬೆಳವಣಿಗೆ ಎಂದು ಹೇಳಿದ್ದಾರೆ.