ಬೆಂಗಳೂರು: ನಂದಿಬೆಟ್ಟಕ್ಕೆ ಜಾಲಿ ರೈಡ್ ಹೊರಟಿದ್ದ ಬೈಕ್ ಸವಾರನೊಬ್ಬ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ ಇನ್ನೊಬ್ಬ ಮಾರಣಾಂತಿಕವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಾನುವಾರ ಬೆಳಿಗ್ಗೆ ನಡೆದ ಘಟನೆಯಲ್ಲಿ ಕೇರಳ ಮೂಲದ ಇರ್ಷಾದ್ ಮೃತಪಟ್ಟಿದ್ದಾನೆ. 100ಕ್ಕೂ ಅಧಿಕ ಯುವಕರ ತಂಡ ಇಂದು ನಂದಿ ಬೆಟ್ಟಕ್ಕೆ ಜಾಲಿ ರೈಡ್ ಹೊರಟಿತ್ತು. ಅವರೊಡನೆ ಇರ್ಷಾದ್ ಸಹ ತನ್ನ ದುಬಾರಿ ಬೈಕ್ ನಲ್ಲಿ ತೆರಳುತ್ತಿದ್ದ. ಆದರೆ ಬೈಕ್ ಏರ್ಪೋರ್ಟ್ ರಸ್ತೆಯ ಕೊಡಿಗೆ ಹಳ್ಳಿ ಬಳಿ ಫ್ಲೈ ಓವರ್ ಬಂದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಇರ್ಷಾದ್ ರಸ್ತೆ ಮೇಲೆ ಉರುಳಿದ್ದಾನೆ. ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದ ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಬದುಕುಳಿಯಲಿಲ್ಲ. ಬೈಕ್ ನಲ್ಲಿದ್ದ ಸಹ ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದೆ.
ಮೃತ ಇರ್ಷಾದ್ ವೈದ್ಯಕೀಯ ಕೋರ್ಸ್ ಮುಗಿಸಿದ್ದ ಎನ್ನಲಾಗಿದೆ.
ಘಟನೆ ಸಂಬಂಧ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ