ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಂಧಿತ ಆರೋಪಿ ಸುಜಿತ್ ಕುಮಾರ್ ಹಾಗೂ ಮೂವರು ಶಂಕಿತ ಆರೋಪಿಗಳ ಎಸ್ ಐಟಿ ಕಸ್ಟಡಿ ಅವಧಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿ ಮೂರನೇ ಎಸಿಎಂಎಂ ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಸುಜಿತ್ ಕುಮಾರ್ ಆಲಿಯಾಸ್ ಪ್ರವೀಣ್, ಹಾಗೂ ಶಂಕಿತರಾದ ಅಮೊಲ್ ಕಾಳೆ, ಅಮಿತ್ ದಿವಾಕರ್ , ಮನೋಹರ್ ದುಂಡಾಪ್ಪ ಯಾದವ್ ಅವರ ಎಸ್ ಐಟಿ ವಿಚಾರಣಾ ಅವಧಿ ನಿನ್ನೆಗೆ ಅಂತ್ಯಗೊಂಡಿತ್ತು. ಇದರಿಂದಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ವಿಶೇಷ ತನಿಖಾ ದಳ ಶಂಕಿತರಿದ್ದ ಸ್ಥಳಕ್ಕೆ ಭೇಟಿ ನೀಡಿದ್ದಾಗ ಅವರು ಶೂಟಿಂಗ್ ತರಬೇತಿ ಪಡೆಯುತ್ತಿದ್ದರು. ಬಂಧಿತ ಸುಜಿತ್ ಕುಮಾರ್ ಹಾಗೂ ಶಂಕಿತರ ಪೊಲೀಸ್ ಕಸ್ಟಡಿ ಅವಧಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಬೇಕೆಂದು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ನಿರ್ಮಲಾ ರಾಣಿ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡರು.
ಆದರೆ, ಈ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಕೀಲ ಎನ್. ಪಿ. ಅಮೃತೇಶ್, ಆರೋಪಿಗಳನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ವಿಚಾರಣೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದೆ. ಆದರೆ, ಅವರನ್ನು ಬೇರೆ ಪ್ರಕರಣಗಳಲ್ಲಿ ತೋರಿಸಲಾಗುತ್ತಿದೆ. ಗರಿಷ್ಠ ವಿಚಾರಣಾ ಅವಧಿ ಈಗಾಗಲೇ ಮುಗಿದಿದೆ ಎಂದರು.
ಆರೋಪಿಗಳು ಬಂದೂಕು ತರಬೇತಿ ಪಡೆಯುತ್ತಿದ್ದ ಬೆಳಗಾವಿ ಹಾಗೂ ಮೈಸೂರಿಗೆ ಕರೆದುಕೊಂಡು ಹೋಗಬೇಕಿದೆ ಎಂದು ಪಾಸಿಕ್ಯೂಸನ್ ನ್ಯಾಯಾಲಕ್ಕೆ ಮನವಿ ಮಾಡಿಕೊಂಡರು. ಈ ಪ್ರಕರಣದ ತನಿಖಾ ವರದಿ ಹಾಗೂ ತಪಿತಸ್ಥನ ಹೇಳಿಕೆಯನ್ನು ಎಸ್ ಐಟಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos