ರಾಜ್ಯ

ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಪ್ರಗತಿ: ಆದರೆ ಮುಖ್ಯ ಆರೋಪಿ ಎಲ್ಲಿ?

Sumana Upadhyaya

ಬೆಂಗಳೂರು: ಪರಶುರಾಮ ವಾಗ್ಮರೆ ಬಂಧನದ ನಂತರ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ವಿಶೇಷ ತನಿಖಾಧಿಕಾರಿಗಳು ಮಹತ್ವದ ಘಟ್ಟಕ್ಕೆ ಬಂದರೂ ಕೂಡ ಕೇಸನ್ನು ಇನ್ನೂ ಆಳವಾಗಿ ಭೇದಿಸಲು ಇನ್ನಷ್ಟು ದೀರ್ಘ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನುತ್ತವೆ ಮೂಲಗಳು.

ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲಿ ಬಳಸಿದ್ದ ಪಿಸ್ತೂಲ್ ಮತ್ತು ಬೈಕ್ ಇನ್ನೂ ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕೊಲೆ ಪ್ರಕರಣದ ಮುಖ್ಯ ಆರೋಪಿಯನ್ನು ಇನ್ನೂ ಪತ್ತೆಹಚ್ಚಿಲ್ಲ. ಆದರೆ ಈ ಹಿಂದೆ ಯೋಚಿಸಿದಂತೆ ಇದು ಸುಪಾರಿ ಕೊಲೆಯಲ್ಲ ಎಂಬುದು ಅಧಿಕಾರಿಗಳಿಗೆ ಖಾತ್ರಿಯಾಗಿದೆ.

ಗೌರಿ ಲಂಕೇಶ್ ಹತ್ಯೆಯಲ್ಲಿ ಇದುವರೆಗೆ ಬಂಧಿತರಾದವರಾದ ಕೆಟಿ ನವೀನ್ ಕುಮಾರ್, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಮತ್ತು ಪರಶುರಾಮ್ ವಾಗ್ಮರೆ ಮತ್ತು ಶಂಕಿತರಾಗಿರುವ ಅಮೊಲ್ ಕಾಳೆ, ಅಮಿತ್ ದೆಗ್ವೆಕರ್ ಮತ್ತು ಮನೋಹರ್ ಅವರನ್ನು ಇನ್ನೂ ಅಪರಾಧಿಗಳೆಂದು ಗುರುತಿಸಿಲ್ಲ. ಗೌರಿ ಹತ್ಯೆಯಲ್ಲಿ ತಮ್ಮದು ಕೂಡ ಪಾತ್ರವಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಕೊಲೆಯ ಪ್ರಧಾನ ಆರೋಪಿಯನ್ನು ಪತ್ತೆಹಚ್ಚುವುದು ವಿಶೇಷ ತನಿಖಾಧಿಕಾರಿಗಳಿಗೆ ಕಷ್ಟಕರ ಕೆಲಸವಾಗಿದೆ.

ಆರೋಪಿಗಳು ಮತ್ತು ಶಂಕಿತರು ಸಂಪೂರ್ಣ ಮಾಹಿತಿ ಬಗ್ಗೆ ಬಾಯ್ಬಿಡುತ್ತಿಲ್ಲ. ಹೀಗಾಗಿ ಯಾರ್ಯಾರು ಇದರ ಹಿಂದೆ ಇದ್ದಾರೆ ಎಂದು ಅವರಿಂದ ಹೇಳಿಸಲು ಪೊಲೀಸರಿಗೆ ಕಷ್ಟವಾಗುತ್ತಿದೆ. ಇದುವರೆಗೆ ಅರ್ಧದಷ್ಟು ಕೆಲಸ ಮಾತ್ರ ಪೂರ್ಣವಾಗಿದೆ ಎನ್ನುತ್ತಾರೆ ವಿಶೇಷ ತನಿಖಾ ತಂಡದ ಅಧಿಕಾರಿಯೊಬ್ಬರು.

ಗೌರಿ ಲಂಕೇಶ್ ಹತ್ಯೆಗೆ ಬಳಸಿರುವ ದೇಶಿ ನಿರ್ಮಿತ ಪಿಸ್ತೂಲ್ ಶಂಕಿತನೊಬ್ಬನ ಬಳಿಯಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಅವರು ಪಿಸ್ತೂಲ್ ನ್ನು ಎಲ್ಲಿಯೋ ಅಡಗಿಸಿಟ್ಟಿರಬೇಕು ಆದರೆ ಇಂತವರ ಬಳಿಯೇ ಪಿಸ್ತೂಲ್ ಇದೆ ಎಂದು ತೀರ್ಮಾನಕ್ಕೆ ಬರಲು ಕಷ್ಟವಾಗುತ್ತಿದೆ. ಸದ್ಯದಲ್ಲಿಯೇ ಪಿಸ್ತೂಲ್ ಸಿಗಬಹುದೆಂದು ನಾವು ಭಾವಿಸಿದ್ದೇವೆ. ಅದು ಸಿಕ್ಕಿದರೆ ನಮ್ಮ ಕೇಸನ್ನು ಭೇದಿಸಲು ಸುಲಭವಾಗುತ್ತದೆ ಎಂದರು.

ಹತ್ಯೆ ಸಂದರ್ಭದಲ್ಲಿ ಬಳಸಿದ್ದ ಬೈಕ್ ಬಗ್ಗೆ ಅಧಿಕಾರಿಗಳಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ.

SCROLL FOR NEXT