ಬೆಂಗಳೂರು: ರಾಷ್ಟ್ರದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಗೌರಿಗೆ ಗುಂಡು ಹಾರಿಸಿದ ಆರೋಪದಡಿ ವಿಶೇಷ ತನಿಖಾ ದಳ (ಎಸ್ಐಟಿ)ದಿಂದ ಬಂಧನಕ್ಕೊಳಗಾಗಿರುವ ಶಂಕಿತ ಶೂಟರ್ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಅಧಿಕಾರಿಗಳು, ನಿನ್ನೆಯಷ್ಟೇ ವಾಗ್ಮೋರೆಯನ್ನುವಿಚಾರಣೆಗೊಳಪಡಿಸಿದ್ದರು. ಮೂವರು ವ್ಯಕ್ತಿಗಳು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡುವಂತೆ ತನಗೆ ಸೂಚಿಸಿದ್ದರು ಎಂದು ವಾಗ್ಮೋರೆ ಹೇಳಿಕೊಂಡಿದ್ದಾನೆ.
ಹತ್ಯೆಗೆ ಸುಪಾರಿಕೊಟ್ಟಿದ್ದ ವ್ಯಕ್ತಿಗಳನ್ನು ನೋಡಿದ್ದು ಬಿಟ್ಟರೆ, ಅವರ ಬಗ್ಗೆ ಬೇರಾವುದೇ ಮಾಹಿತಿಗಳು ನನಗೆ ಗೊತ್ತಿಲ್ಲ ಎಂದು ವಾಗ್ಮೋರೆ ಹೇಳಿಕೊಂಡಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಎಸ್ಐಟಿ ಪೊಲೀಸರು ಇದೀಗ 3 ಶಂಕಿತರ ಒಟ್ಟು 6 ರೇಖಾ ಚಿತ್ರಗಳನ್ನು ರಚಿಸಿದ್ದು, ಶಂಕಿತರ ಕುರಿತಂತೆ ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.
ಹಲವು ಸುದ್ದಿವಾಹಿನಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಶಂಕಿತರನ್ನು ಪತ್ತೆ ಮಾಡಲು ಯತ್ನ ನಡೆಸಲಾಗುತ್ತಿದೆ. ವ್ಯಕ್ತಿಯೊಬ್ಬ ದೇಶೀ ನಿರ್ಮಿತ ಪಿಸ್ತೂಲ್ ನೀಡಿದ್ದ ಎಂದು ವಾಗ್ಮೋರೆ ಹೇಳಿದ್ದಾರೆ. ಹತ್ಯೆಯಾದ ಬಳಿಕ ವ್ಯಕ್ತಿ ಪಿಸ್ತೂಲ್'ನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಸೆರೆಯಾಗುತ್ತಿದ್ದಂತೆಯೇ ಪಿಸ್ತೂಲ್ ಕೂಡ ವಶಕ್ಕೆ ಪಡೆದುಕೊಳ್ಳುವ ವಿಶ್ವಾಸವಿದೆ. ಆರೋಪಿಗಳನ್ನು ಬಂಧಿಸಲು ಎಲ್ಲಾ ರೀತಿಯ ಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹಲವು ಪ್ರದೇಶಗಳಿಗೆ ಭೇಟಿ ನೀಡಿ ವಿಚಾರಣೆಗಳನ್ನು ನಡೆಸುತ್ತಿದ್ದಾರೆ. ಪ್ರಮುಖವಾಗಿ ಕರ್ನಾಟಕ-ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಪರಿಶೀಲನೆಗಳನ್ನು ನಡೆಸುತ್ತಿದೆ. ಮೂವರು ಶಂಕಿತರ ಬಗ್ಗೆ ಯಾವುದೇ ಮಾಹಿತಿಗಳೂ ಇಲ್ಲದೆ, ಕೇವಲ ರೇಖಾಚಿತ್ರಗಳಿಂದ ತನಿಖೆ ನಡೆಸುವುದು ಕಷ್ಟಕರವಾಗುತ್ತದೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು ಸಾಕಷ್ಟು ಶ್ರಮಗಳನ್ನು ಪಡಲಾಗುತ್ತಿದೆ ಎಂದು ತಿಳಿಸಿದ್ದಾರೆ.