ಬೆಂಗಳೂರು: ಕರ್ನಾಟಕ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದು ಬಂಧನಕ್ಕೀಡಾಗಿರುವ ಆರೋಪಿ ತೇಜ್ ಶರ್ಮಾ ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
ನಿನ್ನೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದ ತೇಜ್ ರಾಜ್ ಶರ್ಮಾ ಏಕಾಏಕಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಮೂರು ಚಾಕುವಿನಿಂದ ದಾಳಿ ಮಾಡಿದ್ದ. ಕೂಡಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಿನ್ನೆ ಸಂಜೆ ಆರೋಪಿ ತೇಜ್ ರಾಜ್ ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನಿನ್ನೆ ತಡರಾತ್ರಿ 3 ಗಂಟೆಗೆ ಆರೋಪಿ ತೇಜರಾಜ್ ನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿ ತೇಜ್ ರಾಜ್ ಶರ್ಮಾ ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದ್ದಾರೆ.
ಘಟನೆ ಬಳಿಕ ಎಚ್ಚೆತ್ತ ಸರ್ಕಾರ, ಲೋಕಾಯುಕ್ತ ಕಚೇರಿಗೆ ಬಿಗಿ ಭದ್ರತೆ, ಹೊಸ ಮೆಟಲ್ ಡಿಟೆಕ್ಟರ್ ಅಳವಡಿಕೆ
ಇನ್ನು ಚಾಕು ಇರಿತ ಪ್ರಕರಣದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪ್ರಸ್ತುತ ಲೋಕಾಯುಕ್ತ ಕಚೇರಿಗೆ ಬಿಗಿ ಭದ್ರತೆ ಒದಗಿಸಿದೆ. ಲೋಕಾಯುಕ್ತ ಮಾತ್ರವಲ್ಲದೇ ಎಲ್ಲ ಪ್ರಮುಖ ಸರ್ಕಾರಿ ಸಂಸ್ಥೆಗಳ ಕಚೇರಿಗೆಳಿಗೂ ಭದ್ರತೆ ಬಿಗಿಗೊಳಿಸಲಾಗಿದೆ. ಅಲ್ಲದೆ ಹಾಲಿ ದುರಸ್ತಿಗೀಡಾಗಿರುವ ಲೋಕಾಯುಕ್ತ ಕಚೇರಿಯ ಮೆಟಲ್ ಡಿಟೆಕ್ಟರ್ ಯಂತ್ರವನ್ನು ತೆಗೆದು ಹಾಕಲಾಗಿದ್ದು, ಹೊಸ ಯಂತ್ರವನ್ನು ಅಳವಡಿಸಲಾಗಿದೆ.