ಬೆಂಗಳೂರು: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಇಡೀ ದೇಶ ನೀರವ್ ಮೋದಿಯತ್ತ ನೋಡುತ್ತಿದ್ದರೆ ಅಂತಹುದೇ ಮತ್ತೊಂದು ವಂಚನೆ ಪ್ರಕರಣ ಇದೀಗ ಕರ್ನಾಟಕದಲ್ಲಿ ನಡೆದಿದೆ.
ಹೌದು..ಕರ್ನಾಟಕದ ರಾಜಧಾನಿ ಬೆಂಗಳೂರು ಮೂಲದ ಉದ್ಯಮಿಯೊಬ್ಬನ ಹೆಸರು ಇದೀಗ ಬರೊಬ್ಬರಿ 300 ಕೋಟಿ ಗೂ ಅಧಿಕ ವಂಚನೆ ಪ್ರಕರಣದಲ್ಲಿ ಕೇಳಿಬಂದಿದೆ. ಮೂಲಗಳ ಪ್ರಕಾರ ಬೆಂಗಳೂರಿನ ಬನಶಂಕರಿ ಹಾಗೂ ಯಶವಂತಪುರದಲ್ಲಿ ಕಚೇರಿ ಹೊಂದಿರುವ ವಿಕ್ರಂ ಇನ್ವೆಸ್ಟ್ಮೆಂಟ್ ಕಂಪೆನಿಯಿಂದ ಈ ಬೃಹತ್ ಪ್ರಮಾಣದ ವಂಚನೆ ನಡೆದಿದ್ದು ಈ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಬಂಧಿತರನ್ನು ರಾಘವೇಂದ್ರ ಶ್ರೀನಾಥ್(39 ವರ್ಷ)ಸೂತ್ರಂ ಸುರೇಶ್(41 ವರ್ಷ) ನರಸಿಂಹಮೂರ್ತಿ(44 ವರ್ಷ) ಪ್ರಹ್ಲಾದ್(47 ವರ್ಷ) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳೆಲ್ಲರೂ ಮಲ್ಲೇಶ್ವರಂ, ಬನಶಂಕರಿ ನಿವಾಸಿಗಳೆಂದು ತಿಳಿದುಬಂದಿದ್ದು, ಈ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ. ರಾಘವೇಂದ್ರ ಶ್ರೀನಾಥ್ ಎಂಬಾತ ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದು, ಸೂತ್ರಂ ಸುರೇಶ್ ಮಾಜಿ ಕ್ರೀಡಾ ವರದಿಗಾರನಾಗಿದ್ದ ಎಂದು ತಿಳಿದುಬಂದಿದೆ. ಇವರುಗಳು ಖ್ಯಾತ ಕ್ರೀಡಾಪಟುಗಳು, ರಾಜಕಾರಣಿಗಳು, ಸಿನಿಮಾ ನಟರನ್ನೇ ಗುರಿಯಾಗಿಸಿಕೊಂಡು ವಂಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಚ್ಚರಿ ಎಂದರೆ ಈ ಗ್ಯಾಂಗ್ ನಗರದಲ್ಲಿ ಸ್ಟಾಕ್ ಕಮಾಡಿಟೀಸ್ ಮೇಲೆ ಹಣ ಹೂಡಿಕೆ ಹೆಸರಲ್ಲಿ 300 ಕೋಟಿಗೂ ಅಧಿಕ ಪ್ರಮಾಣದಲ್ಲಿ ವಂಚನೆ ಮಾಡಿದ್ದು, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರೂ ಸೇರಿದಂತೆ ಹಲವು ಗಣ್ಯರಿಗೆ ಈ ಗ್ಯಾಂಗ್ ಮೋಸ ಮಾಡಿದೆ. ಹೂಡಿಕೆ ಮೇಲೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಉದ್ಯಮಿಗಳು, ಗಣ್ಯರಿಂದ ಕೋಟಿಗಟ್ಟಲೇ ಹಣ ಹೂಡಿಕೆ ಮಾಡಿಸಿದ್ದಾರೆ. ಪೊಲೀಸ್ ಮಾಹಿತಿಗಳನ್ವಯ ಒಬ್ಬೊಬ್ಬರು ಏನಿಲ್ಲವೆಂದರೂ ಎಂಟರಿಂದ ಹತ್ತು ಕೋಟಿ ಹೂಡಿಕೆ ಮಾಡಿದ್ದಾರೆ. ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್, ಮಾಜಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಹಾಗೂ ಇತರರು ಸೇರಿದಂತೆ ಇನ್ನೂ ಆನೇಕ ಕ್ರೀಡಾಪಟುಗಳಿಗೆ ಕೋಟಿ ಕೋಟಿ ರೂ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಸ್ಟಾಕ್ ಕಮಾಡಿಟೀಸ್ ಮೇಲೆ ಹಣ ಹೂಡಿಕೆ ಮಾಡಲಿದ್ದೇವೆ ಎಂದು ಹೇಳಿ ಕಳೆದ ಅಕ್ಟೋಬರ್ನಿಂದ ಆರೋಪಿಗಳು ಯಾರಿಗೂ ಲಾಭಾಂಶ ನೀಡಿಲ್ಲ. ಸದ್ಯ ಇವರಿಂದ ವಂಚನೆಗೊಳಗಾದವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.ವಂಚನೆಯ ಬಗ್ಗೆ ಇಬ್ಬರು ಮಾತ್ರ ಇಲ್ಲಿಯವರೆಗೆ ದೂರು ನೀಡಿದ್ದು ಹಲವರಿಗೆ ಕೋಟಿಗಟ್ಟಲೆ ವಂಚನೆ ನಡೆದಿರುವ ಮಾಹಿತಿ ಲಭ್ಯವಾಗಿದೆ ವಂಚನೆಗೊಳಗಾದವರು ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ಪೊಲೀಸ್ ಅಧಿಕಾರಿ ಶರಣಪ್ಪ ಹೇಳಿದ್ದಾರೆ.