ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಯವರ ವಿವಾದಾತ್ಮಕ ಟ್ವೀಟ್ ನಿಂದ ಕಾಂಗ್ರೆಸ್ ಪಕ್ಷ ಮುಜುಗರಕ್ಕೆ ಒಳಗಾಗಿದ್ದು ಇದನ್ನು ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿದೆ. ಟ್ವೀಟ್ ಸಂಬಂಧ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಗೆ ಶೋಕಾಸ್ ನೋಟೀಸ್ ನೀಡಲಾಗಿದೆ.
ಟ್ವೀಟ್ ವಿವಾದ ಕುರಿತಂತೆ ಏಳು ದಿನಗಳಲ್ಲಿ ವಿವರಣೆ ನೀಡಬೇಕೆಂದು ಹರ್ಷ ಮೊಯ್ಲಿಗೆ ಸೂಚನೆ ನೀಡಿದ್ದು ಕೆಪಿಸಿಸಿ ಕಛೇರಿ ಕಾರ್ಯದರ್ಶಿಗಳು ವೀರಪ್ಪ ಮೊಯ್ಲಿ ಪುತ್ರ ಹರ್ಷ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಕಾರ್ಕಳ ವಿಧಾನಸಭೆ ಕ್ಷೇತ್ರದಿಂಡ ಹರ್ಷ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವಿವಾದಾತ್ಮಕ ಟ್ವೀಟ್ ಹಾಕಲ್ಪಟ್ಟ ಅವರ ತಂದೆಯ ಟ್ವಿಟ್ಟರ್ ಖಾತೆಯನ್ನು ಹರ್ಷ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ವೀರಪ್ಪ ಮೊಯ್ಲಿ ಹಾಕಿದ್ದ ಟ್ವಿಟ್ಟರ್ ಸಂದೇಶವನ್ನೇ ಅನುಸರಿಸಿ ಹರ್ಷ ಮೊಯ್ಲಿ ಸಹ ಟ್ವೀಟ್ ಮಾಡಿದ್ದ ಕಾರಣ ಅವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಹಣದ ಮೇಲಾಟ ಅಧಿಕವಾಗಿದೆ. ಟಿಕೆಟ್ ಹಂಚಿಕೆ ಸಂಬಂಧ ಹಣ ಪಡೆದು ಟಿಕೆಟ್ ನೀಡಲಾಗುತ್ತಿದೆ. ಲೋಕೋಪಯೋಗಿ ಸಚಿವರ ಜತೆ ನಂಟು ಹೊಂದಿದ್ದ ಕೆಲ ರಸ್ತೆ ಕಾಂಟ್ರಾಕ್ಟರ್ ಗಳು ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯನ್ನು ನಿರ್ಧರಿಸುತ್ತಿದ್ದಾರೆ ಎನ್ನುವ ಅರ್ಥ ಹೊಮ್ಮಿಸುವ ಟ್ವೀಟ್ ಒಂದನ್ನು ಮೊಯ್ಲಿ ಹಾಗೂ ಅವರ ಪುತ್ರ ಹರ್ಷ ಅವರ ಖಾತೆಯಲ್ಲಿ ಗುರುವಾರ ರಾತ್ರಿ ಹಾಕಲಾಗಿತ್ತು. ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರ್ಕಾರ ಎನ್ನುವುದನ್ನು ಮೊಯ್ಲಿ ಟ್ವೀಟ್ ರುಜುವಾತುಪಡಿಸಿದೆ ಎಂದು ಬಿಜೆಪಿ ಆರೋಪಿಸಿತ್ತು. ತೀವ್ರ ವಿವಾದಕ್ಕೆ ಕಾರಣವಾದ ಆ ಟ್ವೀಟ್ ನ್ನು ತಾವು ಮಾಡಿಲ್ಲ ಎಂದು ವೀರಪ್ಪ ಮೊಯ್ಲಿ ಸ್ಪಷ್ಟನೆ ನೀಡಿದ್ದರು. ಹಾಗೆಯೇ ಆ ಟ್ವೀಟ್ ನ್ನು ಅಳಿಸಿ ಹಾಕಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos