ಮೈಸೂರು; ಮಲ್ಲಿಗೆ ನಗರಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಸಿಬ್ಬಂದಿ ಮೇಲೆ ಮೊಸಳೆಯೊಂದು ದಾಳಿ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಮೃಗಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯನಿರ್ವಹಿಸುತ್ತಿದ್ದ ಪುಟ್ಟಸ್ವಾಮಿ ಎಂಬ ಕಾರ್ಮಿಕನ ಮೇಲೆ ಮೊಸಳೆ ದಾಳಿ ಮಾಡಿದ್ದು, ವ್ಯಕ್ತಿಯ ಕಾಲ್ಬೆರಳುಗಳನ್ನು ಕಚ್ಚಿ ತಿಂದಿದೆ.
ಮಂಗಳವಾರ ಮಧ್ಯಾಹ್ನ ಮೃಗಾಲಯದಲ್ಲಿ ಮೊಸಳೆಯಿರುವ ಹೊಂಡಬ ಬಳಿ ಸ್ವಚ್ಛತಾ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ಪುಟ್ಟಸ್ವಾಮಿಯವರು ಕಾಲಿ ಜಾರಿ ಹೊಂಡಕ್ಕೆ ಬಿದ್ದಿದ್ದಾರೆ. ಈ ವೇಳೆ ಮೊಸಳೆ ಪುಟ್ಟಸ್ವಾಮಿಯವರ ಬಲಗಾಲಿಗೆ ಬಾಯಿ ಹಾಕಿ ಎಳೆದಾಡಿದೆ. ಕೂಡಲೇ ಎಡಗೈಯಿಂದ ಮೊಸಳೆಯನ್ನು ತಳ್ಳಲು ಪುಟ್ಟಸ್ವಾಮಿಯವರು ಮುಂದಾಗಿದ್ದಾರೆ. ಈ ವೇಳೆ ಮೊಸಳೆ ಕೈಗೂ ಕಚ್ಚಿದೆ.
ಈ ವೇಳೆ ಪುಟ್ಟಸ್ವಾಮಿಯವರು ಕೂಗಿದ್ದಾರೆ. ಕೂಡಲೇ ಸಮೀಪದಲ್ಲಿಯೇ ಇದ್ದ ಮತ್ತೊಬ್ಬ ಸಿಬ್ಬಂದಿ ಕೊಕ್ಕೆ ಹಿಡಿದುಕೊಂಡು ಬಂದು ಮೊಸಳೆಯನ್ನು ಓಡಿಸಿ ಪುಟ್ಟಸ್ವಾಮಿಯನ್ನು ರಕ್ಷಣೆ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಪುಟ್ಟಸ್ವಾಮಿಯವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟಸ್ವಾಮಿಯವರು ಬಲಗಾಲಿನ ಎರಡು ಬೆರಳುಗಳನ್ನು ಕಳೆದುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. 15 ದಿನಗಳೊಳಗಾಗಿ ಪುಟ್ಟಸ್ವಾಮಿಯವರು ಚೇತರಿಸಿಕೊಳ್ಳಲಿದ್ದಾರೆಂದು ವೈದ್ಯರು ಹೇಳಿದ್ದು, ವೈದ್ಯಕೀಯ ವೆಚ್ಚವನ್ನು ಮೃಗಾಲಯವೇ ನೋಡಿಕೊಳ್ಳುತ್ತಿದೆ, ದಾಳಿ ಮಾಡಿದ್ದ ಮೊಸಳೆಗೆ ಭಾಗಶಃ ಕುರುಡಾಗಿದೆ ಎಂದು ಮೃಗಾಲಯದ ನಿರ್ದೇಶಕ ರವಿಶಂಕರ್ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos