ಮುಖ್ಯ ಚುನಾವಣಾಧಿಕಾರಿ ಸಜೀವ್ ಕುಮಾರ್
ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ತಡರಾತ್ರಿ ಪತ್ತೆಯಾದ ಸಾವಿರಾರು ಮತದಾರ ಗುರುತಿನ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆ ನಡೆಸುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ತಡರಾತ್ರಿ ರಾಜರಾಜೇಶ್ವರಿ ನಗರದ ಜಾಲಹಳ್ಳಿಯ ಅಪಾರ್ಟ್ವೆುಂಟ್ವೊಂದರಲ್ಲಿ ಸಾವಿರಾರು ಮತದಾರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ತಡರಾತ್ರಿ ತುರ್ತು ಸುದ್ದಿಗೋಷ್ಛಿ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆಯಾದ ಪ್ರಕರಣ ಸಂಬಂಧ ಪೊಲೀಸ್ ತನಿಖೆಗೆ ಆದೇಶ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಚುನಾವಣಾಧಿಕಾರಿ ಮಹೇಶ್ವರರಾವ್ ತನಿಖೆ ನಡೆಸಿದ್ದಾರೆ. ಆಯೋಗ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಅಂತೆಯೇ ಮತದಾರರ ಗುರುತಿನ ಚೀಟಿ ಪತ್ತೆಯಾದ ಫ್ಲಾಟ್ ಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಈ ಫ್ಲಾಟ್ ಮಂಜುಳಾ ನಂಜಾಮರಿ ಎಂಬುವರಿಗೆ ಸೇರಿದ ಫ್ಲ್ಯಾಟ್ ಆಗಿದ್ದು, ಇದನ್ನು ಇವರು ರಾಕೇಶ್ ಎಂಬುವರಿಗೆ ಬಾಡಿಗೆಗೆ ನೀಡಿದ್ದರು ಎಂದು ತಿಳಿದುಬಂದಿದೆ. ಇಲ್ಲಿ ಲ್ಯಾಪ್ಟಾಪ್ ಹಾಗೂ ಪ್ರಿಂಟರ್ ಇಟ್ಟು ವೋಟರ್ ಐಡಿಗಳನ್ನು ಸೃಷ್ಟಿಸಲಾಗಿದೆ. ಕಾರ್ಡ್ ಗಳ ಜತೆಗೆ ಮತದಾರರ ಹೆಸರು ಸೇರಿಸುವ ಫಾರಂ 6ರ ಕೌಂಟರ್ ಫೈಲ್ಗಳು ಒಂದು ಲಕ್ಷ ಇವೆ. ಅವುಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.
ಅಂತೆಯೇ ಆರ್.ಆರ್. ನಗರದಲ್ಲಿ 4,71,459 ಮತದಾರರಿದ್ದಾರೆ. ಈ ವರ್ಷ 44,837 ಮತದಾರರ ಹೆಸರು ಸೇರ್ಪಡೆಯಾಗಿದೆ. ರಾಜ್ಯದಲ್ಲಿ ಮತದಾರರ ಪ್ರಮಾಣ ಹೆಚ್ಚಳ ಸರಾಸರಿ ಶೇ. 6.04 ಇದ್ದರೆ, ಇಲ್ಲಿ ಶೇ. 10.37 ಇದೆ. ಈ ಫ್ಲ್ಯಾಟ್ನಲ್ಲಿ ಹಾಲಿ ಶಾಸಕರ ಕರಪತ್ರಗಳು ಸಹ ಸಿಕ್ಕಿವೆ. ಆ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದರು. ಮೂವರು ವೀಕ್ಷಕರ ನೇತೃತ್ವದಲ್ಲಿ ತನಿಖೆ ನಡೆದಿದೆ. ಶಾಂತಿಯುತ ಹಾಗೂ ಮುಕ್ತ ಚುನಾವಣೆಗೆ ಎಲ್ಲ ಕ್ರಮಗಳನ್ನು ಆಯೋಗ ಕೈಗೊಳ್ಳಲಿದೆ ಎಂದು ಸಂಜೀವ್ ಕುಮಾರ್ ಇದೇ ವೇಳೆ ತಿಳಿಸಿದರು.
ಇನ್ನು ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಕ್ರಮಗಳು ನಡೆದಿದ್ದರೆ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.