ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್
ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರು ಹಾಗೂ ಮೂತ್ರ ವಿಸರ್ಜನೆ ಮಾಡುವವರಿಗೆ ರೂ.500 ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಹಾಲಿ ಇರುವ ರೂ.100 ದಂಡದ ಮೊತ್ತವನ್ನು ಶೀಘ್ರದಲ್ಲಿಯೇ ರೂ.500ಕ್ಕೆ ಹೆಚ್ಚಿಸಲಾಗುವುದು. ಕಸ ಎಸೆಯುವವರ ಮೇಲೆ ಕಣ್ಣಿಡಲು ಶೀಘ್ರದಲ್ಲಿಯೇ ವಾರ್ಡ್'ಗೊಬ್ಬ ಮಾಜಿ ಸೈನಿಕರನ್ನು ನೇಮಕ ಮಾಡಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಮಲ್ಲೇಶ್ವರಂ ಬಿಬಿಎಂಪಿ ಕಚೇರಿಯಲ್ಲಿ ನಿನ್ನೆ ಅಧಿಕಾರಿಗಳೊಂದಿಗೆ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಜ್ಯವನ್ನು ಮನೆ ಬಳಿಗೆ ಬರುವ ಆಟೋ ಟಿಪ್ಪರ್ ಗಳಿಗೆ ನೀಡದೆ ಎಲ್ಲೆಂದರಲ್ಲಿ ಎಸೆಯುವವರನ್ನು ಹಿಡಿದು ರೂ.100 ದಂಡ ವಿಧಿಸಲು ಈಗಾಗಲೇ ಬಿಬಿಎಂಪಿಯಲ್ಲಿ ಅವಕಾಶವಿದೆ. ಆದರೂ, ತ್ಯಾಜ್ಯವನ್ನು ತಂದು ಎಸೆಯುವುದು ಮಾತ್ರ ನಿಂತಿಲ್ಲ. ಹಾಗಾಗಿ ದಂಡದ ಮೊತ್ತವನ್ನು ರೂ.500ಕ್ಕೆ ಹೆಚ್ಚಿಸಲು ಬಿಬಿಎಂಪಿ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಇದನ್ನು ಅನುಮೋದಿಸಿ ದಂಡ ಶುಲ್ಕ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.
ನಗರದಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಪ್ರಸ್ತುತ ಕಸದ ನಿರ್ವಹಣೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ. ನಗರದಲ್ಲಿ 1.30 ಕೋಟಿ ಜನಸಂಖ್ಯೆ ಇದ್ದು, 29 ಲಕ್ಷ ಮನೆಗಳಿವೆ. ಇದರಲ್ಲಿ ಹೋಟೆಲ್, ಮಾಲ್ ಸೇರಿದಂತೆ 5 ಲಕ್ಷ ವಾಣಿಜ್ಯ ಕಟ್ಟಡಗಳಿವೆ. ನಗರದಲ್ಲಿ ಒಟ್ಟಾರೆ ನಿತ್ಯ 5,700 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಮನೆಗಳಿಂದ ತ್ಯಾಜ್ಯ ಸಂಗ್ರಹಣೆಗೆ 4,213 ಆಟೋ ಟಿಪ್ಪರ್ ಗಳು, ನಂತರ ಅದನ್ನು ತ್ಯಾಜ್ಯ ಸಂಸ್ಕರಣಾ ಘಟಗಳಿಗೆ ವಿಲೇವಾರಿ ಮಾಡಲು 566 ಕಾಂಪ್ಯಾಕ್ಟರ್ ಗಳನ್ನು ಗುತ್ತಿಗೆಗೆ ಪಡೆಯಲಾಗಿದೆ. 8 ಮೆಕ್ಯಾನಿಕಲ್ ಸ್ವೀಪಿಂಗ್ ವಾಹನಗಳನು ಕೂಡ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಹೊಸ ವಾಹನ ನೋಂದಣಿ ನಿಷೇಧ ವಿಚಾರ ಕುರಿತು ಚರ್ಚಿಸಲಾಗುತ್ತಿದೆ
ನಗರದಲ್ಲಾಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲೇಬೇಕಿದೆ ಹಾಗೂ ಸಂಚಾರ ದಟ್ಟಣೆಗೆ ಪರಿಹಾರವನ್ನು ಹುಡುಕಬೇಕಿದೆ. ಹೀಗಾಗಿ ಈ ಬಗ್ಗೆ ಕೆಲ ಸಲಹೆಗಳು ಬಂದಿದ್ದು, ಇದರಲ್ಲಿ ಹೊಸ ವಾಹನ ನೋಂದಣಿಯನ್ನು 2 ವರ್ಷಗಳ ಕಾಲ ನಿಷೇಧ ಮಾಡುವ ಸಲಹೆಗಳು ಕೂಡ ಬಂದಿದೆ. ವಾಹನ ನೋಂದಣಿ ನಿಷೇಧಿಸಿ ಎಲೆಕ್ಟ್ರಿಕ್ ಬಸ್ ಗಳನ್ನು ಬಿಡುವ ಕುರಿತು ಚಿಂತನೆಗಳು ನಡೆದಿವೆ. ಹೊಸ ವಾಹನ ನೋಂದಣಿಗಳನ್ನು ನಿಷೇಧಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದಿದ್ದಾರೆ.