ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್
ಬೆಂಗಳೂರು: ರದ್ದಾದ ನೋಟುಗಳ ಅಕ್ರಮ ವರ್ಗಾವಣೆ ಹಾಗೂ 57 ಕೆಜಿ ಚಿನ್ನದ ಗಟ್ಟಿ ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ರೆಡ್ಡಿ ಆಪ್ತ ಆಲಿಖಾನ್ ಪತ್ತೆ ಕಾರ್ಯ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತರು, ಪ್ರಕರಣದಲ್ಲಿ ಮಾಜಿ ಸಚಿವ ಸಚಿವ ಗಾಲಿ ಜನಾರ್ಧನ ರೆಡ್ಡಿ ವಿಚಾರಣೆ ನಡೆಸಬೇಕಿದೆ. ಆದರೆ ಅವರು ತಲೆಮರೆಸಿಕೊಂಡಿದ್ದಾರೆ ಎಂದರು.
ಅಂಬಿಡೆಂಟ್ ಸಂಸ್ಥೆಗೆ ಸೇರಿದ 12 ಬ್ಯಾಂಕ್ ಖಾತೆಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದ್ದು, ಇನ್ನೂ 57 ಕೆ.ಜಿ. ಚಿನ್ನದ ಗಟ್ಟಿ ಜಪ್ತಿ ಮಾಡಬೇಕಿದೆ ಎಂದು ಸುನೀಲ್ ಕುಮಾರ್ ಅವರು ಹೇಳಿದ್ದಾರೆ.
ಜನಾರ್ದನ ರೆಡ್ಡಿ ಅವರು ವಂಚಕ ಅಂಬಿಡೆಂಟ್ ಸಂಸ್ಥೆಯೊಂದಿಗೆ 18 ಕೋಟಿ ರುಪಾಯಿ ಹಣ ವರ್ಗಾವಣೆಗಾಗಿ ಅಂಬಿಕಾ ಜ್ಯುವೆಲ್ಲರ್ಸ್ ಮಾಲೀಕ ರಮೇಶ್ ಕೊಠಾರಿ ಎಂಬಾತನೊಂದಿಗೆ ಡೀಲ್ ಮಾಡಿದ್ದು, ಬಳ್ಳಾರಿಯ ತಾಜ್ಮಹಲ್ ಜ್ಯುವೆಲ್ಲರಿ ಮಾಲೀಕ ರಮೇಶ್ ಬಳ್ಳಾರಿಗೆ 57 ಕೆಜಿ ಚಿನ್ನದ ಗಟ್ಟಿ ರೂಪದಲ್ಲಿ ನೀಡಿದ್ದು ಅದನ್ನು ರೆಡ್ಡಿ ಆಪ್ತ ಅಲಿಖಾನ್ಗೆ ಕೊಟ್ಟಿರುವುದಾಗಿ ಇಡಿ ತನಿಖೆ ವೇಳೆ ತಿಳಿದು ಬಂದಿದೆ.
ಅಂಬಿಡೆಂಟ್ ಮಾಲೀಕ ಸಯ್ಯದ್ ಫರೀದ್, ಜನಾರ್ದನ ರೆಡ್ಡಿ, ಬ್ರಿಜೇಶ್ ರೆಡ್ಡಿ ಅವರು ಡೀಲ್ನಲ್ಲಿ ಭಾಗಿಯಾಗಿದ್ದು ತಾಜ್ ವೆಸ್ಟ್ ಎಂಡ್ನಲ್ಲಿ ಡೀಲ್ ನಡೆದಿದೆ ಎಂದು ತಿಳಿದು ಬಂದಿದೆ.
ರಮೇಶ್ ಹೇಳಿಕೆಯ ಮೇರೆಗೆ ಜನಾರ್ದನ ರೆಡ್ಡಿ ಮತ್ತು ಅಲಿಖಾನ್ ಅವರನ್ನು ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿ ಮತ್ತು ಆಲಿಖಾನ್ ಪತ್ತೆಗಾಗಿ ಮಂಜುನಾಥ್ ಚೌಧರಿ ಅವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಸುನೀಲ್ ಕುಮಾರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos