ಬೆಂಗಳೂರು: ರಾಜ್ಯ ಮಟ್ಟದ ಎಲ್ಲಾ ನೀರಾವರಿ ಯೋಜನೆ ಹಾಗೂ ಜಲ ವಿವಾದಗಳ ಬಗ್ಗೆ ಸರ್ಕಾರವು ಮುಂದಿನ ನಿಲುವುದು ತೆಗೆದುಕೊಳ್ಳುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಡಿಸೆಂಬರ್ 6ರಂದು ಎಲ್ಲಾ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ನೀರಾವರಿ ಸಚಿವರ ಸಭೆ ನಡೆಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ನಿರ್ಧರಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ಮಹದಾಯಿ ನ್ಯಾಯಾಧೀಕರಣದ ಇತ್ತೀಚಿನ ಬೆಳವಣಿಗೆ ಕುರಿತು ವಿರೋಧ ಪಕ್ಷಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಡಿ.6 ರಂದು ಜಲ ವಿವಾದಗಳ ಬಗ್ಗೆ ಸಭೆ ನಡೆಸಲು ನಿರ್ಧಾರ ಮಾಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ರಾಜ್ಯದ ರೈತರ ಹಿತದೃಷ್ಟಿಯಿಂದ ನ್ಯಾಯಾಲಯದ ಆದೇಶದಂತೆ ಲಭ್ಯವಾಗಿರುವ ಹೆಚ್ಚುವರಿ ನೀರಿನ ಬಳಕೆಗೆ ಕಾಮಗಾರಿ ಪ್ರಾರಂಭಿಸಲು ಸರ್ಕಾರ ಸಿದ್ಧವಿದೆ. ಆದರೆ, ನೀರು ಹಂಚಿಕೆಯ ಬಗ್ಗೆ ಕೇಂದ್ರ ಸರ್ಕಾರವು ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಇದನ್ನು ಕೂಡಲೇ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಜೊತೆಗ ನಿಯಮ 5(3)ರ ಅಡಿ ಸ್ಪಷ್ಟೀಕರಣಕ್ಕೆ ಮನವಿ ಸಲ್ಲಿಸಿದ್ದೇವೆಂದು ಮಾಹಿತಿ ನೀಡಿದರು.
ರಾಜ್ಯಕ್ಕೆ ಹೆಚ್ಚುವರಿ ನೀರು ಪಡೆಯುವ ನಿಟ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಆ ಭಾಗದ ರೈತರ ಹಿತಾಸಕ್ತಿ ಕಾಯಲು ಒಟ್ಟಾಗಿ ಶ್ರಮಿಸಲು ಸರ್ಕಾರ ಬದ್ಧವಿದೆ. ಇದಕ್ಕೆ ಮಾಜಿ ಸಚಿವರು ಹಾಗೂ ಎಲ್ಲಾ ಪಕ್ಷಗಳು ಸಹಕಾರ ನೀಡಬೇಕು. ಎಲ್ಲಾ ಪಕ್ಷಗಳ ಸಲಹೆ ಕೇಳಲು ಬೆಳಗಾವಿ ಅಧಿವೇಶನಕ್ಕೂ ಮೊದಲ ಸಭೆ ನಡೆಸಲಾಗುವುದು ಎಂದರು.