ಬೆಂಗಳೂರು: ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಿಧನ ಹೊಂದಿ 5 ದಿನಗಳು ಕಳೆಯುತ್ತಿರುವ ಹಿನ್ನಲೆಯಲ್ಲಿ ನಗರದ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಕುಟುಂಬದಿಂದ ಹಾಲು-ತುಪ್ಪ ಕಾರ್ಯ ನಡೆಯುತ್ತಿದೆ.
ಇಂದು ಬೆಳಿಗ್ಗೆ 9.30ರಿಂದ ಅಂಬಿ ಸಮಾಧಿಗೆ ಹಾಲು ತುಪ್ಪ ಕಾರ್ಯ ಆರಂಭವಾಗಿದ್ದು, ಕಾರ್ಯಕ್ಕೆ ಅಂಬರೀಷ್ ಅವರ ಪುತ್ರ, ಪತ್ನಿ ಸುಮಲತಾ, ಕುಟುಂಬಸ್ಧರು, ನಟ ದರ್ಶನ್ ಆಗಮಿಸಿದ್ದಾರೆ.
ಒಕ್ಕಲಿಗ ಸಂಪ್ರದಾಯದಂತೆ ವಿಧಿ ಕಾರ್ಯ ನಡೆಯುತ್ತಿದ್ದು, ಕುಟುಂಬಸ್ಥರಿಂದ ಅಸ್ತಿ ಸಂಚರ್ಯ ಕಾರ್ಯ ನಡೆಯುತ್ತಿದೆ. ಪತ್ನಿ ಸುಮಲತಾ ಹಾಗೂ ಅಂಬಿ ಪುತ್ರ ಅಭಿಷೇಕ್, ಸಂಬಂಧಿಕರು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ತೆರಳಿ ಅಸ್ತಿ ವಿಸರ್ಜನೆ ಮಾಡಲಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸುವ ಸಾಧ್ಯತೆಗಳಿದ್ದು, ಕಾರ್ಯ ನಡೆಯುವ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿರುವ ಅಧಿಕಾರಿಗಳು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ. ಸ್ಥಳದಲ್ಲಿ ಈಗಾಗಲೇ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಪೂಜಾ ಕಾರ್ಯದಲ್ಲಿ ಕುಟುಂಬಸ್ಥರು ಹಾಗೂ ಸಿನಿಮಾ ರಂಗದವರಿಗಷ್ಟೇ ಅವಕಾಶವಿದ್ದು, ಪೂಜೆ ಪೂರ್ಣಗೊಂಡ ಬಳಿಕ ಸಮಾಧಿ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ.