ಬೆಂಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ನಡೆಸುತ್ತಿದ್ದ ಕುಖ್ಯಾತ ದರೋಡೆ ಗ್ಯಾಂಗನ್ನು ಬೆನ್ನತ್ತಿದ ಚಿಕ್ಕಜಾಲ ಠಾಣೆ ಪೊಲೀಸರು ಒಬ್ಬಾತನ ಕಾಲಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಆರ್.ಟಿ.ನಗರದ ನಿವಾಸಿ ಮೊಹಮದ್ ಅಶ್ರಫ್ಖಾನ್ (24) ಬಂಧಿತ. ಆತನನ್ನು ಬಂಧಿಸಲು ಮುಂದಾದ ವೇಳೆ ಪೇದೆ ಲೋಕೇಶ್ ಬಲಗೈಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕೇವಲ ಒಂದೂವರೆ ತಾಸಿನ ಅವಧಿಯಲ್ಲಿ ಐದಾರು ಕಡೆ ದರೋಡೆ ನಡೆಸಿ ಇನ್ನೂ ಕೃತ್ಯ ಮುಂದುವರಿಸಿದ್ದ ಗ್ಯಾಂಗನ್ನು ಬೆನ್ನತ್ತಿದ ಪೊಲೀಸರು ಒಬ್ಬನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಎರಡು ಮೂರು ಬೈಕುಗಳಲ್ಲಿ ರಾತ್ರಿ ವೇಳೆ ದರೋಡೆಗೆ ಇಳಿಯುತ್ತಿದ್ದ ಗ್ಯಾಂಗ್ನ ಲೀಡರ್ ಮೊಹಮದ್ ಅಶ್ರಫ್ಖಾನ್. ತಡರಾತ್ರಿ ನಂತರ ನಸುಕಿನವರೆಗೂ ಗ್ಯಾಂಗ್ ದಡೋಡೆ ಮಾಡುತ್ತಿತ್ತು. ಈ ತಂಡ ಬೆಳಗಿನ ಜಾವ ನಾಲ್ಕು ಗಂಟೆಯಿಂದ 5.30ರ ಸಮಯದೊಳಗೆ ಚಿಕ್ಕಜಾಲ ಠಾಣಾ ವ್ಯಾಪ್ತಿಯ 3 ಹಾಗೂ ಏರ್ಪೋರ್ಟ್ ಠಾಣಾ ವ್ಯಾಪ್ತಿಯಲ್ಲಿ ಆರು ಮಂದಿಗೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು. ಇದರ ಸಂಬಂಧ ನಾಗರಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮಾಹಿತಿ ಬಂದ ತಕ್ಷಣವೇ ಎರಡು ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಕಾ ಬಂದಿ ಹಾಕಿದ್ದರು.
ಭಾರತೀನಗರದ ಬಳಿ ಸಬ್ಇನ್ಸ್ಪೆಕ್ಟರ್ ಪ್ರವೀಣ್ಕುಮಾರ್ ಮತ್ತು ಕಾನ್ಸ್ಟೇಬಲ್ ಲೋಕೇಶ್ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾಗ ಅದೇ ರಸ್ತೆಯಲ್ಲಿ ಬಂದ ದುಷ್ಕರ್ಮಿಗಳು ಪೊಲೀಸರನ್ನು ಕಂಡು ಬೈಕ್ ಹಿಂದಕ್ಕೆ ತಿರುಗಿಸಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದರು.
ಅನುಮಾನಗೊಂಡ ಸಬ್ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್ ತಮ್ಮ ಬೈಕ್ನಲ್ಲಿ ಕಾನ್ಸ್ಟೇಬಲ್ ಜತೆ ಆರೋಪಿಗಳನ್ನು ಬೆನ್ನತ್ತಿದ್ದರು. ವಿಐಟಿ ಕಾಲೇಜಿನ ಬಳಿ ಆರೋಪಿಗಳ ಬೈಕ್ ಅಡ್ಡಗಟ್ಟಿ ಹಿಡಿಯಲು ಮುಂದಾದ ಕಾನ್ಸ್ಟೇಬಲ್ ಲೋಕೇಶ್ ಅವರ ಮೇಲೆ ಆರೋಪಿಗಳು ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿ ಉಳಿದ ಆರೋಪಿಗಳು ತಪ್ಪಿಸಿಕೊಳ್ಳಲು ನೆರವಾಗಿದ್ದ.
ಈ ವೇಳೆ ಪಿಎಸ್ಐ, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು. ಆದರೆ ಅದಕ್ಕೆ ಬಗ್ಗದ ಆರೋಪಿ ಪೊಲೀಸರ ಮೇಲೆಯೇ ದಾಳಿಗೆ ಮುಂದಾಗಿದ್ದ. ಈ ವೇಳೆ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos