ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಇಳಿಕೆ ಮಾಡಿ ಒಂದು ತಿಂಗಳಾಗಿದ್ದು, ಮತ್ತೆ ಇಂಧನ ಮೇಲಿನ ಸುಂಕವನ್ನು ಇಳಿಕೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ.
ತೈಲ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಜನತೆಗೆ ನಿರಾಳ ನೀಡಿರುವ ಕೇಂದ್ರ ಸರ್ಕಾರ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರದಲ್ಲಿ ರೂ.2.50 ಇಳಿಕೆ ಮಾಡಿದೆ.
ಈ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಾರಸ್ವಾಮಿಯವರು, ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ದರ ಇಳಿಕೆ ಮಾಡಿದೆ. ಆದರೆ, ನಾವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಇಳಿಕೆ ಮಾಡಿ ಒಂದು ತಿಂಗಳಾಗಿದ್ದು, ಮತ್ತೆ ಇಂಧನ ಮೇಲಿನ ಸುಂಕವನ್ನು ಇಳಿಕೆ ಮಾಡುವುದಿಲ್ಲ. ಮತ್ತೆ ಕಡಿಮೆ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.