ರಾಜ್ಯ

ಕೊಪ್ಪಳ: ಮೊದಲ ರಾತ್ರಿಯಂದೇ ವಧು ಅಪಹರಣ, ಫಸ್ಟ್ ನೈಟ್ ಕನಸಿಗೆ ಕೊಳ್ಳಿಯಿಟ್ಟ ದುಷ್ಕರ್ಮಿಗಳು!

Raghavendra Adiga
ಕೊಪ್ಪಳ: ಈಗಷ್ಟೇ ವಿವಾಹವಾಗಿದ್ದು ಇನ್ನೇನು ವಧೂ ವರರು ಮೊದಲ ರಾತ್ರಿಯ ಸವಿಯುಣಬೇಕು ಎನ್ನುವಷ್ಟರಲ್ಲಿ ವಧು ಅಪಹರಣಕ್ಕೊಳಗಾಗಿರುವ ವಿಲಕ್ಷಣ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿ ತಾಲೂಕು ಗುಡೂರು ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮಲ್ಲನ ಗೌಡ ಹಾಗೂ ಗಾಯತ್ರಿ ವಿವಾಹವಾಗಿದ್ದರು. 15 ದಿನಗಳ ಹಿಂದೆ ಹುರು ಹಿರಿಯರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿತ್ತು.ಕುಷ್ಟಗಿ ತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ವಿವಾಹ ಜರುಗಿತ್ತು. 
ವಿವಾಹವಾಗಿ ಬಳಿಕ ವಧು-ವರರು ಮೊದಲ ರಾತ್ರಿ ಕಾರ್ಯಕ್ರಮವನ್ನು ಗುಡೂರಿನಲ್ಲಿ ಆಯೋಜಿಸಿದ್ದಾಗ ಅಪಹರಣಕಾರರು ಹೊಂಚು ಹಾಕಿ ವಧುವನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಪೋಲೀಸರು ತಿಳಿಸಿದರು.
ಮೊದಲ ರಾತ್ರಿಯಂದು ವಧು ಶೌಚಾಲಯಕ್ಕೆಂದು ತೆರಳಿದ್ದಾಗ ಅಲ್ಲೇ ಹೊಂಚುಹಾಕಿ ಕುಳಿತಿದ್ದ ಆರು ಮಂದಿ ದುಷ್ಕರ್ಮಿಗಳು ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ.ಮನೆಯವರೆಲ್ಲಾ ಸೇರಿ ಬಿಡಿಸಹೋದರೂ ಪ್ರಯೋಜನವಾಗಿಲ್ಲ. 
ಘಟನೆಗೆ ಸಂಬಂಧಿಸಿ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೋಲೀಸರು ಯಾವುದೇ ಕ್ರಮ ಕೈಗೊಲ್ಳುತ್ತಿಲ್ಲ ಎಂದು ದೂರುದಾರರಾದ ವರನ ಮನೆಯವರು ಆರೋಪಿಸಿದ್ದಾರೆ.
SCROLL FOR NEXT